ರಾಮನಗರ: ಒಂಟಿ ಮಹಿಳೆಯ ಕೈಗಳನ್ನು ಕಟ್ಟಿ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ರಾಮನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ಸರಸ್ವತಿ ಕೊಲೆಯಾದ ದುರ್ದೈವಿ ಮಹಿಳೆ. ಕುಟುಂಬದಿಂದ ದೂರವಾಗಿ ಒಬ್ಬಂಟಿಯಾಗಿ ವಾಸವಿದ್ದರು. ಮೃತ ಸರಸ್ವತಿ ಅಕ್ಕಪಕ್ಕದ ಮನೆಯವರ ಜೊತೆಯೂ ಕೂಡಾ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯೇ ಸರಸ್ವತಿ ಅವರ ಕೊಲೆಯಾಗಿದ್ದು, ಪರಿಚಿತರೆ ಮದ್ಯಪಾನ ಮಾಡಿ ಬಳಿಕ ಆಕೆಯ ಕೈ ಕಟ್ಟಿ ಕೊಲೆ ಮಾಡಿ ಬಳಿಕ ಮನೆಯ ಬಾಗಿಲು ಭದ್ರಪಡಿಸಿ ಹೋಗಿದ್ದಾರೆ. ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಕಳೆದ ಮೂರು ದಿನಗಳಿಂದ ಸರಸ್ವತಿ ಮನೆಯಿಂದ ಹೊರ ಬಂದಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ ವೇಳೆ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಟೌನ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.