ಶಿರಾಡಿ ಘಾಟ್‍ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ – ಘನ ವಾಹನಗಳಿಗೆ ನಿರ್ಬಂಧ ಮುಂದುವರಿಕೆ

Public TV
2 Min Read

ಹಾಸನ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ಭೂಕುಸಿತ ಹಾಗೂ ರಸ್ತೆ ಕುಸಿತವಾದ ಪರಿಣಾಮ ಶಿರಾಡಿ ಘಾಟ್ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಶುಕ್ರವಾರ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದರು. ಇದೀಗ ಮಳೆ ಕಡಿಮೆಯಾದ ಹಿನ್ನೆಲೆ ಲಘು ವಾಹನಗಳಿಗೆ ಶಿರಾಡಿ ಘಾಟ್ ರಸ್ತೆಯಲ್ಲಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

ಶಿರಾಡಿ ಘಾಟ್ ರಸ್ತೆ ದಿಢೀರ್ ಬಂದ್ ಆಗಿದ್ದರಿಂದ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದರು ಇದರಿಂದಾಗಿ ಹಾಸನ ಹೊರವಲಯದ ಬೈಪಾಸ್‍ನಲ್ಲಿ ಸಾವಿರಾರು ಬೃಹತ್ ವಾಹನಗಳು ಕಿಲೋಮೀಟರ್‌ಗಟ್ಟಲೆ ನಿಂತಿವೆ. ಸರಿಯಾದ ಊಟ, ನೀರು, ಶೌಚಾಲಯ ವ್ಯವಸ್ಥೆ ಇಲ್ಲದೆ ಚಾಲಕರು ಹಾಗೂ ನಿರ್ವಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ರಸ್ತೆ ಬೆಂಗಳೂರು-ಹಾಸನ-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಅಲ್ಲದೇ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವವರು ಇದೇ ಮಾರ್ಗದಲ್ಲಿ ಸಂಚರಿಸಬೇಕಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ಆದರೆ ಶಿರಾಡಿ ಘಾಟ್ ರಸ್ತೆ ಬಂದ್ ಪರಿಣಾಮ ಬದಲಿ ಮಾರ್ಗದಲ್ಲಿ ಸಂಚರಿಸಲು ಪ್ರಯಾಸ ಪಡಬೇಕಾಗಿದೆ. ಇದನ್ನೂ ಓದಿ: ಮತ್ತೆ ಬಂದ್ ಆಗ್ತಿದೆಯಾ ಶಿರಾಡಿ ಘಾಟ್..?

ಈ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿ ಹೊಸ ಮಾರ್ಗದಲ್ಲಿ ಸಂಚರಿಸುವ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಕಾರು, ಜೀಪು, ಟೆಂಪೋ, ಮಿನಿ ವ್ಯಾನ್, ಆಂಬುಲೆನ್ಸ್‌ಗಳು ಏಕಮುಖವಾಗಿ ಸಕಲೇಶಪುರ, ಆನೆಮಹಲ್, ಕ್ಯಾನಳ್ಳಿ, ಚಿನ್ನಳ್ಳಿ, ಕಡಗರಹಳ್ಳಿ ಮಾರ್ಗದಲ್ಲಿ ಮಾರನಹಳ್ಳಿ ತಲುಪಿ ನಂತರ ಶಿರಾಡಿ ಘಾಟ್ ರಸ್ತೆಯಲ್ಲಿ ಮಂಗಳೂರಿಗೆ ಹೋಗಲು ಅವಕಾಶ ನೀಡಲಾಗಿದೆ. ಅದೇ ರೀತಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಕಾರು, ಜೀಪು, ಟೆಂಪೋ, ಮಿನಿವ್ಯಾನ್‍ಗಳು ಮಾರನಹಳ್ಳಿಯಿಂದ ಕಾಡುಮನೆ, ಕಾರ್ಲೆಕೂಡಿಗೆ, ಆನೆಮಹಲ್ ಸಕಲೇಶಪುರ ಮಾರ್ಗದ ಮೂಲಕ ಬೆಂಗಳೂರಿಗೆ ಹೋಗಲು ಅನುಮತಿ ನೀಡಲಾಗಿದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಮಾರ್ಗರೇಟ್ ಆಳ್ವ ಆಯ್ಕೆ

ಲಘು ವಾಹನಗಳಿಗೆ ಶಿರಾಡಿ ಘಾಟ್ ರಸ್ತೆಯಲ್ಲಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿದೆ. ಇಂದು ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಡಿಸಿ ಆರ್.ಗಿರೀಶ್ ಶಿರಾಡಿ ಘಾಟ್ ಬಂದ್ ಮಾರ್ಗಸೂಚಿ ಬದಲಿಸಿ ಎರಡು ಕಡೆಯಿಂದ ಯಾವುದೇ ಸಮಸ್ಯೆ ಆಗದಂತೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಿ ಆದೇಶಿದ್ದಾರೆ. ಇದರಿಂದಾಗಿ ಲಘು ವಾಹನಗಳು ಓಡಾಡಲು ಅನುಕೂಲವಾಗಿದೆ. ಮತ್ತೊಂದೆಡೆ ಮಳೆ ಕಡಿಮೆಯಾಗಿದ್ದು ಭೂಕುಸಿತವಾಗಿರುವ ದೋಣಿಗಾಲ್ ಬಳಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಮರದ ಪೋಲ್‌ ಹಾಗೂ ಮಣ್ಣಿನ ಚೀಲಗಳನ್ನು ಬಳಸಿ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ರಸ್ತೆ ದುರಸ್ತಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದುರಂತವೆಂದರೆ ಪ್ರತಿವರ್ಷ ಮಳೆಗಾಲದಲ್ಲಿ ಭೂಮಿ ಕುಸಿಯುತ್ತಿದ್ದರು ಇದುವರೆಗೂ ಶಾಶ್ವತ ಪರಿಹಾರ ರೂಪಿಸಲು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರ ವಿಫಲವಾಗಿರುವುದು ಜನರು ಹಾಗೂ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *