ನನ್ನ ಮನೆ ಮೇಲೆ ದಾಳಿ ನಡೆಸಿದ್ರೆ ಐಟಿ ಅಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ: ಎಂಬಿ ಪಾಟೀಲ್

Public TV
1 Min Read

ಬೆಂಗಳೂರು: ನನ್ನ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದರೆ ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ಆಗಿದ್ದಕ್ಕೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸದ್ಯದಲ್ಲೇ ನನ್ನ ಮನೆ ಮೇಲೂ ದಾಳಿ ನಡೆಯುತ್ತದೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದ ಸಿಕ್ಕಿದೆ. ನನ್ನ ಪ್ರಭಾವ ಕಡಿಮೆ ಮಾಡಬೇಕು, ನನ್ನ ಹೆಸರನ್ನು ಕೆಡಿಸಲು ಈ ಹುನ್ನಾರ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಐಟಿ ಅಧಿಕಾರಿಗಳು ಬಂದು ನನ್ನ ಮನೆ ಮೇಲೆ ದಾಳಿ ನಡೆಸಲಿ. ಕಪ್ಪು ಹಣ ಇದೆಯೋ ಇಲ್ಲವೋ ಎನ್ನುವುದು ಅವರಿಗೆ ತಿಳಿಯುತ್ತದೆ. ಅಧಿಕಾರಿಗಳು ಬಂದರೆ ಹೂಗುಚ್ಛ ನೀಡಿ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.

ನನಗೆ ಐಟಿ ಇಲಾಖೆ ದಾಳಿ ಬಗ್ಗೆ ಯಾವುದೇ ಆತಂಕ ಇಲ್ಲ. ಸ್ವತಂತ್ರವಾಗಿ ತನಿಖೆ ಮಾಡಲಿ. ಆದರೆ ಯಾರದ್ದೋ ಮಾತು ಕೇಳಿ ದಾಳಿ ಮಾಡುವಂತದ್ದಲ್ಲ. ನನ್ನ ಮೇಲೆ ಈ ವಾರ, ತಿಂಗಳು ಇಲ್ಲ ಚುನಾವಣೆಗೆ ಮೊದಲು ದಾಳಿ ಮಾಡಿಸಲು ಮೂರು ದಿನಗಳಿಂದ ಹುನ್ನಾರ ನಡೆಯುತ್ತಿದೆ. ಹೀಗಾಗಿ ನಾನು ನನ್ನ ಕಾರ್ಯಕ್ರಮಗಳನ್ನ ಬಿಟ್ಟು ಬಂದಿದ್ದೇನೆ. ಡಿ ಕೆ ಶಿವಕುಮಾರ್ ಮನೆ ಮೇಲೆ ನಡೆದಿರುವ ದಾಳಿ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಮನೆ ಮೇಲಿನ ದಾಳಿ ಕೇವಲ ನೆಪ ಮಾತ್ರ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು, ಕೈ ನಾಯಕರನ್ನು ದುರ್ಬಲಗೊಳಿಸಲು ಬಿಜೆಪಿ ಈ ಅಸ್ತ್ರ ಪ್ರಯೋಗಿಸಿದೆ. ಗೋವಿಂದರಾಜು ಡೈರಿ ಬಗ್ಗೆ ಶೀಘ್ರ ಇತ್ಯರ್ಥ ಆಗಬೇಕು. ಇನ್ಶಿಯಲ್ ಏನು? ಯಾರದ್ದು ಎನ್ನುವುದು ಬಗೆಹರಿಯಬೇಕು. ಚುನಾವಣೆ ತನಕ ಗೋವಿಂದರಾಜು ಡೈರಿ ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ಅವರು ಹೇಳಿದರು.

ಇದನ್ನೂ ಓದಿ: ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಎಷ್ಟು ಕೋಟಿ ಹಣ ಸಿಕ್ಕಿದೆ ಗೊತ್ತಾ?

 

Share This Article
Leave a Comment

Leave a Reply

Your email address will not be published. Required fields are marked *