ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ

Public TV
2 Min Read

ಬೆಳಗಾವಿ: ಕೊಲ್ಲಾಪುರದಲ್ಲಿ ಎಂಇಎಸ್ ಪುಂಡರು ಕನ್ನಡ ಧ್ವಜ ಸುಟ್ಟ ಪ್ರಕರಣ ಖಂಡಿಸಿ ವಿಧಾನಸಭೆಯಲ್ಲಿ ಇವತ್ತು ಖಂಡನಾ ನಿರ್ಣಯ ಮಂಡಿಸಲಾಯಿತು. ಜೆಡಿಎಸ್ ಶಾಸಕ ಅನ್ನದಾನಿ ಎಂಇಎಸ್ ಪುಂಡರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಖಂಡನಾ ನಿರ್ಣಯ ಮಂಡಿಸಿದ್ರು. ಈ ಖಂಡನಾ ನಿರ್ಣಯಕ್ಕೆ ಪಕ್ಷಬೇಧ ಮರೆತು ಸಹಮತ ವ್ಯಕ್ತವಾಯ್ತು.

ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಕನ್ನಡ ಧ್ವಜ ಹಿಡಿದು ಶೂನ್ಯವೇಳೆಯಲ್ಲಿ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ನನ್ನ ತಾಯಿ. ನನ್ನ ತಾಯಿಗೆ ಬೆಂಕಿ ಹಚ್ಚಿದ್ದಾರೆ. ಮಂಗಳವಾರ ಬೆಂಕಿ ಹಚ್ಚಿದ್ದು, ಮಹಾರಾಷ್ಟ್ರ ಸರ್ಕಾರ ಏನು ಮಾಡುತ್ತಿದೆ? ಎರಡು ದಿನ ಆದ್ರೂ ಕ್ರಮ ಕೈಗೊಂಡಿಲ್ಲ. ಕರುನಾಡ ಜನ ಕರುಣಾಮಯಿಗಳು, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಾಡು ನಮ್ಮದು. ಉದ್ದೇಶಪೂರ್ವಕವಾಗಿ ನಮ್ಮನ್ನ ಕೆಣಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡಿ ಎಂದು ಧರಣಿ ಕೂಡ ನಡೆಸಿದ್ರು. ಇದನ್ನೂ ಓದಿ:  ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!

ಇದೇ ವೇಳೆ ಮಧ್ಯಪ್ರವೇಶ ಮಾಡಿ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅನ್ನದಾನಿ ಬಹಳ ಪ್ರಾಮುಖ್ಯ ವಿಷಯ ಪ್ರಸ್ತಾಪಿಸಿದ್ದಾರೆ. ಮಹಾರಾಷ್ಟ್ರ ಪುಂಡರು ಬಾವುಟ ಸುಟ್ಟು ಹಾಕಿದ್ದಾರೆ. ಅವರನ್ನು ಮತಿಹೀನರು ಎಂದು ಕರೆಯಬೇಕಾಗುತ್ತದೆ. ನಾವೆಲ್ಲರೂ ಭಾರತೀಯರು, ಆದರೆ ಭಾಷವಾರು ಪ್ರಾಂತ್ಯವನ್ನಾಗಿ ಮಾಡಿಕೊಂಡಿದ್ದೇವೆ. ಕನ್ನಡ ಬಾವುಟದ ಮೇಲೆ ಭಾವನಾತ್ಮಕ ಸಂಬಂಧ ಇದೆ. ಇದನ್ನು ನಾನು ನಿಜವಾಗಿಯೂ ಖಂಡಿಸುತ್ತೇನೆ. ಇದರಿಂದ ರಾಜ್ಯ-ರಾಜ್ಯಗಳ ನಡುವೆ ದ್ವೇಷ ಅಸೂಯೆಗಳು ಉಂಟಾಗುತ್ತೆ. ಹೀಗಾಗಿ ಕನ್ನಡಕ್ಕೆ ಒಂದು ನಿರ್ಣಯ ಮಾಡಿ, ಶಿಕ್ಷೆ ಕೊಡಿ ಎಂದು ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡೋಣ ಎಂದು ತಿಳಿಸಿದರು.

ಬಳಿಕ ಸರ್ಕಾರದ ಪರವಾಗಿ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ಖಂಡನಾ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದ್ರು. ಇದು ನಿಜವಾಗಿಯೂ ನಮಗೆಲ್ಲ ನೋವನ್ನು ತಂದಿದೆ. ಯಾವುದೇ ಸರ್ಕಾರ ಇದ್ರು, ನೆಲ, ಜಲ, ಭಾಷೆ ರಕ್ಷಣೆ ಮಾಡೋದು ನಮ್ಮೆಲ್ಲರ ಕರ್ತವ್ಯ. ಎಂಇಎಸ್ ಅವರು ಪದೇ-ಪದೇ ಪುಂಡಾಡಿಕೆ ಮಾಡ್ತಿದ್ದಾರೆ. ಧ್ವಜ ಸುಟ್ಟು ಹಾಕಿರುವರು ಕಿಡಿಗೇಡಿಗಳು. ನಮ್ಮ ನೆಲದಲ್ಲಿ ಈ ರೀತಿ ಆಗಿದಿದ್ರೆ ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಆದರೆ ಅಲ್ಲಿನ ನೆಲದಲ್ಲಿ ಆಗಿರೋದ್ರಿಂದ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತಾಡ್ತೇವೆ. ಜೊತೆಗೆ ಖಂಡನಾ ನಿರ್ಣಯವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಕಳುಹಿಸಿಕೊಡ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪಾಂಡವರ ಕಾಲದ ಕೋಟೆ ಬೆಟ್ಟ ಬೊಳ್ಲಪ್ಪ ಈಶ್ವರ ದೇವಾಲಯದಲ್ಲಿ ಉತ್ಸವ

Share This Article
Leave a Comment

Leave a Reply

Your email address will not be published. Required fields are marked *