ನಿಪಾ ವೈರಸ್ ಗೆ ಅಲರ್ಟ್- ಆರೋಗ್ಯ ಇಲಾಖೆಯಿಂದ ಎಚ್ಚರಿಕೆಯ ಸಂದೇಶ

Public TV
1 Min Read

ಬೆಂಗಳೂರು: ನಿಪಾ ವೈರಸ್ ವಿಚಾರವಾಗಿ ಕರ್ನಾಟಕದಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನರಿಗೆ ಎಚ್ಚರಿಕೆ ಸಂದೇಶ ನೀಡಿದೆ.

ಬಾವಲಿ ಹೆಚ್ಚಿರುವ ಪ್ರದೇಶದಲ್ಲಿ ತಯಾರಿಸುವ ನೀರಾ ಅಥವಾ ಸೇಂದಿ ಕುಡಿಯದಂತೆ ಎಚ್ಚರಿಸಿದೆ. ಅಲ್ಲದೆ ಬಾವಲಿಗಳಿರುವ ಬಾವಿ ನೀರನ್ನು ಉಪಯೋಗಿಸದಂತೆ ಸೂಚಿಸಿದ್ದು, ಹಣ್ಣು ಮತ್ತು ಒಣ ಖರ್ಜೂರ ತಿನ್ನುವಾಗ ಸಂಪೂರ್ಣ ಶುದ್ಧೀಕರಿಸಿ ತಿನ್ನುವಂತೆ ಟಿಪ್ಸ್ ನೀಡಿದೆ.

ಅನಾರೋಗ್ಯದಿಂದರುವ ಹಂದಿ, ಇತರ ಪ್ರಾಣಿಗಳ ಜೊತೆ ಹೆಚ್ಚು ಕಾಲ ಇರದಂತೆ ಸೂಚಿಸಿದೆ. ಅಲ್ಲದೆ ಜನರಿಗಾಗಿ ಸಹಾಯ ವಾಣಿ ತೆರೆದಿದೆ. 104ಗೆ ಕರೆ ಮಾಡಿ ನಿಪಾ ವೈರಸ್ ಕುರಿತು ಮಾಹಿತಿ ಪಡೆಯಬಹುದಾಗಿದೆ.

ನಿಪಾ ವೈರಸ್ ಎಂದರೇನು?
1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಪಾ ವೈರಸ್ ಎಂದು ಕರೆಯುತ್ತಾರೆ. ನಿಪಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಪಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

ವೈರಸ್ ಹೇಗೆ ಹರಡುತ್ತದೆ?
ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿನ್ನೋದ್ರಿಂದ ಹರಡುತ್ತೆ.
ಸಾಂಕ್ರಾಮಿಕ ಕಾಯಿಲೆಯಾದ್ರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತೆ.
ಹೀಗಾಗಿ ಬಾವಲಿಗಳು ಕಚ್ಚಿದ ಸಾಧ್ಯತೆಯಿರುವ ಹಣ್ಣುಗಳನ್ನು ತಿನ್ನಲೇಬೇಡಿ.

ನಿಪಾ ವೈರಸ್ ಲಕ್ಷಣಗಳೇನು?
– ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ
– ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ
– ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ
– ಬಳಿಕ ಪ್ರಜ್ಞಾಹೀನರಾಗುತ್ತಾರೆ
– ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ
– ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು

Share This Article
Leave a Comment

Leave a Reply

Your email address will not be published. Required fields are marked *