ಆಹಾರ ಪದಾರ್ಥದಲ್ಲಿ ಹುಳ ಪ್ರಕರಣ – ಶಿಕ್ಷಕರಿಗೆ ಬೆದರಿಸಿದ ಅಕ್ಷರ ದಾಸೋಹದ ನಿರ್ದೇಶಕ

Public TV
1 Min Read

ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ಸರ್ಕಾರಿ ಶಾಲೆಗಳಿಗೆ ಬಿಸಿಯೂಟದ ಯೋಜನೆಗೆ ವಿತರಿಸಿದ ಆಹಾರ ಪದಾರ್ಥಗಳಲ್ಲಿ ಹುಳು ಪತ್ತೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ.

ಎಚ್.ಡಿ.ಕೋಟೆ ಅಕ್ಷರ ದಾಸೋಹ ನಿರ್ದೇಶಕ ಸಿದ್ದರಾಜುರಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ. ಆಹಾರ ಪದಾರ್ಥಗಳಲ್ಲಿ ಹುಳ ಇರುವ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಬಂದ ನಂತರ ಶಾಲೆಗಳಿಗೆ ಭೇಟಿ ನೀಡಿದ ಅಕ್ಷರ ದಾಸೋಹ ನಿರ್ದೇಶಕ ಸಿದ್ದರಾಜು, ಶಾಲೆಯ ಶಿಕ್ಷಕರಿಗೆ ಬೆದರಿಸಿ ಇದು ಹಳೆಯ ದಾಸ್ತಾನು ಎಂದು ಸುಳ್ಳು ಹೇಳುವಂತೆ ಸೂಚಿಸಿದ್ದಾರೆ.

ನಾನು ನಿಮ್ಮ ಮೇಲಾಧಿಕಾರಿ ನಾನು ಹೇಳಿದಂತೆ ಕೇಳಿ ಎಂದು ತಾಕೀತು ಮಾಡಿ ಹುಳು ಇರುವುದು ನವೆಂಬರ್ ತಿಂಗಳ ಬೇಳೆ ಎಂದು ಬರೆದುಕೊಡುವಂತೆ ಒತ್ತಾಯಿಸಿ ಶಿಕ್ಷಕನಿಗೆ ಬೆದರಿಸಿ ಸಹಿ ಮಾಡಿಸಿಕೊಂಡಿದ್ದಾರೆ. ನಂತರ ಇದು ಹಳೆಯ ದಾಸ್ತಾನು ಎಂದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.

ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿದ್ಯಾಂತಹ ಸುಮಾರು 304 ಶಾಲೆಯ ವಿದ್ಯಾರ್ಥಿಗಳು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಈ ಶಾಲೆಗಳಿಗೆ ಉತ್ತಮವಾದ ಆಹಾರ ಪದಾರ್ಥಗಳ ಪೂರೈಕೆ ಆಗುತ್ತಿಲ್ಲ. ಕಳೆದು ಎರಡು ತಿಂಗಳಿಂದ ಶಾಲೆಗಳಿಗೆ ಪೂರೈಕೆಯಾಗಿರುವ ತೊಗರಿಬೇಳೆ ಹಾಗೂ ಅಕ್ಕಿಯಲ್ಲಿ ಓಟ್ಟೆಹುಳುಗಳು ತುಂಬಿತ್ತು. ಬಿಸಿಯೂಟದ ಸಿಬ್ಬಂದಿ ಇವುಗಳನ್ನು ಎಷ್ಟೇ ಶುಚಿ ಮಾಡಿದ್ರೂ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಪೋಷಕಾಂಶ ಸಿಗದ ಈ ಆಹಾರವನ್ನು ಮಕ್ಕಳು ತಿನ್ನಲು ಸಾಧ್ಯವಾಗದೇ ಎಸೆಯುತ್ತಿದ್ದರು.

ಈ ವಿಚಾರವನ್ನು ಅಕ್ಷರ ದಾಸೋಹದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಅವರು, ಆಹಾರ ಇಲಾಖೆಯಿಂದ ಪೂರೈಕೆಯಾಗುತ್ತಿರುವ ಆಹಾರವೇ ಇದಾಗಿದ್ದು ನಾವೇನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದರು. ಇತ್ತ ಸಿಬ್ಬಂದಿ ಬೇರೆ ದಾರಿಯಿಲ್ಲ ಎಂಬಂತೆ ಇದೇ ಆಹಾರವನ್ನು ಮಧ್ಯಾಹ್ನ ಅಡುಗೆ ಮಾಡಿ ಮಕ್ಕಳಿಗೆ ನೀಡುತ್ತಿದ್ದರು. ಹಸಿದು ಬಂದ ಬಡ ಮಕ್ಕಳು ಕೂಡ ತಟ್ಟೆಯಲ್ಲಿ ಹುಳ ಕಂಡರೂ ಕಣ್ಮುಚ್ಚಿಕೊಂಡು ತಿನ್ನುತ್ತಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *