ಪಾಗಲ್ ಪ್ರೇಮಿಯ ಹುಚ್ಚಾಟ – ಹುಬ್ಬಳ್ಳಿ ಏರ್‌ಪೋರ್ಟ್ ಸಿಬ್ಬಂದಿ ಹೈರಾಣು

Public TV
2 Min Read

ಹುಬ್ಬಳ್ಳಿ: ಪೊಲೀಸರ ನಿರ್ಲಕ್ಷವೋ ಪಾಗಲ್ ಪ್ರೇಮಿಯ ಹುಚ್ಚಾಟವೋ ಗೊತ್ತಿಲ್ಲ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಯಾವುದೇ ಸಮಯದಲ್ಲಿ ದೊಡ್ಡ ಅಪಘಾತ ನಡೆಯಬಹುದು.

ಹೌದು…ಗೋವಾ ಮೂಲದ ವ್ಯಕ್ತಿ ರಾಯ್ ಡಿಯಾಸ್ (26) ಎಂಬಾತ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ದಿನಕ್ಕೆ ಸಾವಿರಾರು ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾನೆ. ಕೇವಲ ಇಲ್ಲಿನ ಸಿಬ್ಬಂದಿಗೆ ಕರೆಗಳನ್ನು ಮಾಡಿದ್ದರೆ ಸುಮ್ಮನೆ ಇರಬಹುದು. ಆದರೆ ನಿಲ್ದಾಣದ ಮುಖ್ಯ ಮತ್ತು ಅತೀ ಸೂಕ್ಷ್ಮ ಪ್ರದೇಶವಾದ ಏರ್ ಟ್ರಾಫಿಕ್ ಕಂಟ್ರೋಲ್ ರೂಮ್‍ಗೂ ಕರೆ ಮಾಡಿ ತೊಂದರೆ ಕೊಡುತ್ತಿದ್ದಾನೆ. ಕೇವಲ ಒಂದು ಎರಡು ಕರೆಗಳನ್ನು ಈತ ಮಾಡುತಿಲ್ಲ. ಬದಲಾಗಿ ನಿರಂತರವಾಗಿ ಬೇರೆ ಬೇರೆ ಇಂಟರ್ ನೆಟ್ ನಂಬರ್ ನಿಂದ ಕರೆ ಮಾಡುತ್ತಿದ್ದು, ಹೀಗಾಗಿ ಇಲ್ಲಿನ ಸಿಬ್ಬಂದಿಗೆ ಕೆಲಸ ಮಾಡಲೂ ಆಗುತ್ತಿಲ್ಲ.

ಧಾರವಾಡ ಮೂಲದ ಯುವತಿಯೊಬ್ಬಳು ಗೋವಾ ಏರ್‌ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಗೋವಾ ಮೂಲದ ವ್ಯಕ್ತಿ ರಾಯ್ ಡಿಯಾಸ್ ಜೊತೆ ಸಂಬಂಧ ಇತ್ತು. ಆದರೆ ಕಾರಣಾಂತರ ಅವಳ ಜೊತೆ ಅವನ ಲವ್ ಬ್ರೇಕಪ್ ಆಗಿತ್ತು. ನಂತರ ಅವಳು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗಾವಣೆ ಆಗುತ್ತಾಳೆ. ಇತ್ತ ಪಾಗಲ್ ಪ್ರೇಮಿ ಗೋವಾ ತೊರೆದು ರಾಯ್ ಡಿಯಾಸ್ ದುಬೈಗೆ ಹೋಗುತ್ತಾನೆ. ಆಗಿನಿಂದ ಈ ಪಾಗಲ್ ಪ್ರೇಮಿ ಇಲ್ಲಿನ ಸಿಬ್ಬಂದಿ, ಮುಖ್ಯಸ್ಥರು ಸೇರಿದಂತೆ ಕಂಟ್ರೋಲ್ ರೂಮ್ ಗೆ ನಿರಂತರವಾಗಿ ಬೆದರಿಕೆಯ ಕರೆ ಮಾಡುತ್ತಿದ್ದಾನೆ. ಇಲ್ಲಿನ ಸಿಬ್ಬಂದಿ, ಕಂಟ್ರೋಲಿಂಗ್ ಆಫೀಸರ್ ನಂಬರ್ ಗಳನ್ನು ವೆಬ್‍ಸೈಟ್ ನಿಂದ ಪಡೆದು ಕರೆ ಮಾಡಿ ತೊಂದರೆ ಕೊಡುತ್ತಿದ್ದಾನೆ.

ಬೆದರಿಕೆ ಕರೆಯಿಂದ ರೋಸಿ ಹೋಗಿದ್ದ ನಿಲ್ದಾಣದ ಸಿಬ್ಬಂದಿ ಕಳೆದ ವರ್ಷ ಆಗಸ್ಟ್ ರಂದು ಸೈಬರ್ ಕ್ರೈಂನಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿಯೂ ದೂರು ನೀಡಿದ್ದಾರೆ. ಆದರು ಯಾವುದೇ ಪ್ರಯೋಜನ ಆಗಿಲ್ಲ. ಇವನ ಹುಚ್ಚಾಟದಿಂದ ಎಸ್ಟೋ ಸಲ ವಿಮಾನದ ಲ್ಯಾಂಡಿಂಗ್‍ನಲ್ಲೂ ತೊಂದರೆಗಳಾಗಿವೆ. ಇಲ್ಲಿ ಹೆಚ್ಚಾಗಿ ವಿವಿಐಪಿಗಳೇ ಬರುವುದರಿಂದ ಪೊಲೀಸರು ಅಲರ್ಟ್ ಆಗಬೇಕಿತ್ತು. ಆದರೆ ಪೊಲೀಸರು ಮಾತ್ರ ಕ್ಯಾರೆ ಅಂದಿಲ್ಲ. ಈಗಲಾದರೂ ಪೊಲೀಸರು ಎಚ್ಚೆತ್ತುಕೊಂಡರೆ ಒಳ್ಳೆಯದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *