2 ತಿಂಗಳ ಬಳಿಕ ಕೆನಡಿಯನ್ನರಿಗೆ ಇ-ವೀಸಾ ಸೇವೆಗಳ ಪುನರಾರಂಭಕ್ಕೆ ಭಾರತದ ನಿರ್ಧಾರ

Public TV
1 Min Read

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡದ ಆರೋಪಗಳಿಂದ ಹದಗೆಟ್ಟಿರುವ ಭಾರತ ಕೆನಡಾದ ರಾಜತಾಂತ್ರಿಕ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡು ಬಂದಿದ್ದು ಎರಡು ತಿಂಗಳ ಬಳಿಕ ಕೆನಡಾ ಪ್ರಜೆಗಳಿಗೆ ಇ ವೀಸಾ (e-visa) ಸೇವೆಯನ್ನು ಪುನಾರಂಭಿಸಲು ಭಾರತ ಸರ್ಕಾರ ನಿರ್ಧರಿಸಿದೆ.

G20 ಸಭೆಯ ಬಳಿಕ ಕೆನಡಾ ಪ್ರಧಾನಿ (Canada PM) ತೀವ್ರ ಮುಜುರಗ ಎದುರಿಸಿದ ಬಳಿಕ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು. ಈ ಆರೋಪದ ಬಳಿಕ ಭಾರತ (India) ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿತ್ತು, ಕೆನಡಾ ಪ್ರಜೆಗಳಿಗೆ ವೀಸಾ ನೀಡುವುದನ್ನು ಭಾರತ ನಿಲ್ಲಿಸಿತ್ತು.

ಜೂನ್‍ನಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಗುರುದ್ವಾರದ ಹೊರಗೆ ಅಪರಿಚಿತ ದಾಳಿಕೋರರಿಂದ ನಿಜ್ಜಾರ್‍ನನ್ನು ಗುಂಡಿಕ್ಕಿ ಕೊಂದ ಬಳಿಕ ಭಾರತ ಕೆನಡಾ ನಡುವೆ ಸಮಸ್ಯೆ ಶುರುವಾಯಿತು. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸಂಸತ್ತಿನಲ್ಲಿ ಗುಪ್ತಚರ ವರದಿಗಳ ಆಧಾರದ ಮೇಲೆ ಭಾರತೀಯ ಸರ್ಕಾರಿ ಏಜೆಂಟರು ಮತ್ತು ನಿಜ್ಜರ್ ಹತ್ಯೆಯ ನಡುವಿನ “ವಿಶ್ವಾಸಾರ್ಹ” ಸಂಪರ್ಕಗಳ ಬಗ್ಗೆ ಆರೋಪಿಸಿದರು. ಅರೋಪಗಳು ಅಮೆರಿಕ ಗುಪ್ತಚರ ಸಹಾಯದಿಂದ ಬೆಂಬಲಿತವಾಗಿದೆ ಆದರೆ ಸಾರ್ವಜನಿಕ ಪುರಾವೆಗಳೊಂದಿಗೆ ಇನ್ನೂ ರುಜುವಾತುಪಡಿಸಬೇಕಾಗಿದೆ ಎಂದು ಹೇಳಿದ್ದರು.

ಜಸ್ಟಿನ್ ಟ್ರುಡೊ ಆರೋಪಗಳನ್ನು ವಿರೋಧಿಸಿದ್ದ ಭಾರತ ಆರೋಪಗಳನ್ನು “ಅಸಂಬದ್ಧ” ಮತ್ತು ರಾಜಕೀಯ ಪ್ರೇರಿತ ಎಂದು ಆಕ್ಷೇಪಿಸಿತ್ತು. ಮಾಹಿತಿಯ ಮೂಲ ಹೊರ ಹಾಕುವಂತೆ ಒತ್ತಾಯಿಸಿತ್ತು. ಬಳಿಕ ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕಳಿಹಿಸಿ, ವೀಸಾ ನೀಡುವುದನ್ನು ನಿಲ್ಲಿಸಿತ್ತು. ಸದ್ಯ ಭಾರತ ತನ್ನ ನಿರ್ಧಾರ ಸಡಿಲಿಸಿದ್ದು ಪರಿಸ್ಥಿತಿ ತಿಳಿಗೊಳ್ಳುವ ಮುನ್ಸೂಚನೆ ಸಿಕ್ಕಿದೆ.

Share This Article