ಕ್ವಾರಂಟೈನ್ ಟೈಂನಲ್ಲಿ ‘ಪಕೋಡಾ’ ಹುಡುಕಿದ ಅಗ್ನಿಸಾಕ್ಷಿ ತಂಡ

Public TV
2 Min Read

ಬೆಂಗಳೂರು: ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ನೇತೃತ್ವದಲ್ಲಿ ಬಹುಭಾಷಾ ನಟರ ತಂಡ ಈ ಹಿಂದೆ ಮನೆಯಲ್ಲೇ ಇದ್ದುಕೊಂಡು ಶಾರ್ಟ್ ಫಿಲ್ಮ್ ಮಾಡುವ ಮೂಲಕ ಸಾಮಾಜಿಕ ಅಂತರದ ಮಹತ್ವವನ್ನು ಸಾರಿತ್ತು. ಈ ಚಿತ್ರ ಇತರರಿಗೆ ಪ್ರೇರಣೆಯಾಗಿತ್ತು ಸಹ. ಅದೇ ರೀತಿ ಇದೀಗ ಅಗ್ನಿಸಾಕ್ಷಿ ಧಾರಾವಾಹಿ ತಂಡ ಸಹ ಇಂತಹದ್ದೇ ಪ್ರಯತ್ನವನ್ನು ಮಾಡಿದ್ದು, ಫನ್ನಿಯಾಗಿರುವ ಕಥೆಯನ್ನಿಟ್ಟುಕೊಂಡು ಜನತೆಯನ್ನು ನಗಿಸಿದ್ದಾರೆ.

ಬಿಗ್‍ಬಿ ನೇತೃತ್ವದಲ್ಲಿ ಮಾಡಿದ ಶಾರ್ಟ್ ಫಿಲ್ಮ್‍ನಲ್ಲಿ ಕನ್ನಡಕ ಹುಡುಕುವ ಕಾನ್ಸೆಪ್ಟ್ ಇತ್ತು. ಆದರೆ ಅಗ್ನಿಸಾಕ್ಷಿ ತಂಡದ ಕಾನ್ಸೆಪ್ಟ್ ಕೇಳಿದರೆ ನಿಮ್ಮ ಬಾಯಲ್ಲಿ ಖಂಡಿತ ನೀರು ಬರುತ್ತದೆ. ಅದೇನಪ್ಪಾ ಅಂತಾ ವಿಷಯ ಅಂತೀರಾ, ಫುಲ್ ಹಾಟ್ ಆಗಿ ನಗಿಸಲು ಯತ್ನಿಸಿದ್ದಾರೆ ಕಣ್ರಿ…..ಪಕೋಡಾ ಕಾನ್ಸೆಪ್ಟ್ ಇಟ್ಟುಕೊಂಡು ಅಗ್ನಿಸಾಕ್ಷಿ ಧಾರಾವಾಹಿ ತಂಡ ಒಂದೊಳ್ಳೆ ಪ್ರಯತ್ನ ಮಾಡಿದ್ದು, ಇನ್ನೂ ವಿಶೇಷವೆಂದರೆ ರಾಜ್ಯದ ವಿವಿಧ ಭಾಗಗಳ ಭಾಷೆಗಳ ಶೈಲಿಯನ್ನು ಬಳಸಿದ್ದಾರೆ.

ಉತ್ತರ ಕರ್ನಾಟಕ, ಕರಾವಳಿ, ತುಳು ಹೀಗೆ ರಾಜ್ಯದ ವಿವಿಧ ಶೈಲಿಯ ಭಾಷೆಗಳನ್ನು ಬಳಿಸಿದ್ದಾರೆ. ಈ ಮೂಲಕ ಎಲ್ಲ ಭಾಷೆಯ ಜನರಿಗೆ ಹತ್ತಿರವಾಗಿದ್ದಾರೆ. ಮೊದಲು ರಾಜೇಶ್ ಧ್ರುವ ಅವರಿಗೆ ಪಕೋಡಾ ಕುರಿತು ನೆನಪಾಗುತ್ತದೆ. ನಂತರ ವಿಜಯ್ ಸೂರ್ಯ ಬಳಿ ಪಕೋಡಾ ಕುರಿತು ಕೇಳುತ್ತಾರೆ. ಬಳಿಕ ಸುಕೃತಾ, ಐಶ್ವರ್ಯ ನಂತರ ವೈಷ್ಣವಿ ಹಾಗೂ ಇಷಿತಾ ವರ್ಷ ಬಳಿ ಪಕೋಡಾ ಪ್ರಪೋಸಲ್ ಹೋಗುತ್ತದೆ. ಹೀಗೆ ಕೊನೆಗೆ ಮುಖ್ಯಮಂತ್ರಿ ಚಂದ್ರು ಅವರ ಬಳಿ ಪಕೋಡಾ ಕುರಿತು ಹೇಳಲು ರಾಜೇಶ್ ಮುಖ್ಯಮಂತ್ರಿ ಚಂದ್ರು ಬಳಿ ಹೋಗಿರುತ್ತಾರೆ. ಆಗ ಮುಖ್ಯಮಂತ್ರಿ ಚಂದ್ರು ಅವರು ಆಗಲೇ ಪಕೋಡಾ ಸವಿಯುತ್ತಿರುತ್ತಾರೆ.

ಮುಖ್ಯಮಂತ್ರಿ ಚಂದ್ರು ಅವರು ಈ ವೇಳೆ ಮಾತನಾಡಿ, ತಿನ್ನೋದಕ್ಕೆ ಹುಡುಕುತ್ತಿದ್ದಿರಾ, ನನಗೀಗಾಲೇ ಸಿಕ್ಕಿಬಿಟ್ಟಿದೆ ಪಕೋಡಾ. ಮನೆಯಲ್ಲೇ ಸಿಗುತ್ತೆ ಅಲ್ಲಿ ಇಲ್ಲಿ ಹುಡುಕಾಡಿಕೊಂಡು ತಿನ್ನಬೇಡಿ, ಅಕಸ್ಮಾತ್ ತಿಂದರೆ ಹೊಗೆ ಹಾಕಿಸಿಕೊಂಡು ಬಿಡುತ್ತೀರಾ ಎಂದು ಎಚ್ಚರಿಸುತ್ತಾರೆ. ಅಲ್ಲದೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಬೇರೆಯವರಿಗೂ ಅಪಾಯ ತಂದಿಡಬೇಡಿ ಎಂದು ಕರೆ ನೀಡಿದ್ದಾರೆ. ಅಂದಹಾಗೆ ಒಟ್ಟು 12 ಜನ ಈ ಚಿತ್ರದಲ್ಲಿ ನಟಿಸಿದ್ದು, ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಶಾರ್ಟ್ ಫಿಲ್ಮ್ ಕುರಿತು ನಟ ರಾಜೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಹಿಂದಿ ಶಾರ್ಟ್ ಮೂವಿ ನೋಡಿ ನಾವೂ ಯಾಕೆ ಹೀಗೆ ಮಾಡಬಾರದು ಎನಿಸಿತು. ತಕ್ಷಣವೇ ನಮ್ಮದೇ ಅಗ್ನಿಸಾಕ್ಷಿ ಗ್ರೂಪ್‍ನಲ್ಲಿ ಚರ್ಚಿಸಿದೆವು. ಎಲ್ಲರೂ ಒಪ್ಪಿಕೊಂಡರು, ಒಂದು ದಿನದಲ್ಲಿ ಸ್ಕ್ರಿಪ್ಟ್ ಬರೆದೆ, ಚಿತ್ರ ಕಾಮಿಡಿಯಾಗಿದ್ದರೆ ಹೆಚ್ಚು ಜನಕ್ಕೆ ರೀಚ್ ಆಗುತ್ತೆ ಎಂಬ ಉದ್ದೇಶದಿಂದ ಪಕೋಡಾ ಕಾನ್ಸೆಪ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದೆವು. ಅಲ್ಲದೆ ಮುಂಚೆಯೇ ಪ್ರಿಪೇರ್ ಆಗಿದ್ದರಿಂದ ಎಲ್ಲರೂ ತಮ್ಮ ವಿಡಿಯೋವನ್ನು ನನಗೆ ಕಳುಹಿಸಿದರು. ನಂತರ ಅದನ್ನು ನಾನೇ ಎಡಿಟ್ ಮಾಡಿ, ಫೈನಲ್ ಟಚ್ ನೀಡಿದೆ. ಔಟ್‍ಪುಟ್ ನೋಡಿದಾಗ ಎಲ್ಲರಿಗೂ ತುಂಬಾ ಖುಷಿಯಾಯಿತು ಎಂದಿದ್ದಾರೆ.

 

View this post on Instagram

 

Concept Editing by – extremely talented @rajesh.dhruva1

A post shared by Vaishnavi (@vaishnavi.r.b_) on

Share This Article
Leave a Comment

Leave a Reply

Your email address will not be published. Required fields are marked *