ತ್ರಿವಳಿ ತಲಾಖ್ ಬಳಿಕ ನಿಖಾ ಹಲಾಲ, ಬಹುಪತ್ನಿತ್ವ ರದ್ದತಿಗೆ ಕೇಂದ್ರ ಚಿಂತನೆ!

Public TV
1 Min Read

ನವದೆಹಲಿ: ತ್ರಿವಳಿ ತಲಾಖ್ ನಿಷೇಧದ ಪರ ನಿಂತಿದ್ದ ಕೇಂದ್ರ ಸರ್ಕಾರ ಈಗ ಸದ್ಯ ಚಾಲ್ತಿಯಲ್ಲಿರುವ ನಿಖಾ ಹಲಾಲ ಹಾಗೂ ಬಹು ಪತ್ನಿತ್ವವನ್ನು ನಿಷೇಧ ಮಾಡಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಪರ ನಿಲ್ಲಲು ಚಿಂತನೆ ನಡೆಸಿದೆ.

ಈ ಕುರಿತು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ವಿಚಾರಣೆ ನಡೆಯುವ ವೇಳೆ ತೊಂದರೆ ಅನುಭವಿಸಿದ ಮಹಿಳೆಯರ ಪರ ನಿಲ್ಲುವ ಕುರಿತು ಕೇಂದ್ರ ಚಿಂತನೆ ನಡೆಸಿದೆ. ಈ ಎರಡು ಪದ್ಧತಿಗಳು ಮಹಿಳಾ ವಿರೋಧಿಯಾಗಿದ್ದು ಎಂದು ನಿಷೇಧ ಮಾಡಬೇಕೆಂದು ಕೆಲ ಮಹಿಳೆಯರು ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕೆಲ ದಿನಗಳಲ್ಲಿ ಈ ಅರ್ಜಿ ವಿಚಾರಣೆಗೆ ಬರಲಿದ್ದು ಈ ವೇಳೆ ಸಂತ್ರಸ್ತ ಮಹಿಳೆಯರ ಪರ ನಿಲ್ಲಲು ಕೇಂದ್ರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಕೇಂದ್ರ ಕಾನೂನು ಸಚಿವಾಲಯಕ್ಕೆ ಅಭಿಪ್ರಾಯ ತಿಳಿಸುವಂತೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಕೋರ್ಟ್ ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಅನ್ವಯ ಮುಸ್ಲಿಂ ವೈಯಕ್ತಿಕ ಕಾನೂನು(ಷರಿಯಾತ್) ನಿರ್ಬಂಧಗಳನ್ನು ಅಸಂವಿಧಾನಿಕ ಎಂದು ಘೋಷಿಸಲು ಸಾಧ್ಯವೇ ಎಂದು ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿತ್ತು.

ಏನಿದು ನಿಖಾ ಹಲಾಲ?
ಒಮ್ಮೆ ವಿಚ್ಛೇದನ ಪಡೆದ ನಂತರ ದಂಪತಿ ಮತ್ತೊಮ್ಮೆ ಮದುವೆಯಾಗಬೇಕಾದರೆ, ಪತ್ನಿ ಬೇರೊಬ್ಬನನ್ನು ಮದುವೆಯಾಗಿ ನಂತರ ಅವನಿಂದ ವಿಚ್ಛೇದನ ಪಡೆದು ಮೊದಲಿನ ಸತಿಯನ್ನು ಮದುವೆಯಾಗುವುದಕ್ಕೆ ನಿಖಾ ಹಲಾಲ ಎಂದು ಕರೆಯಲಾಗುತ್ತದೆ.

ಬಹುಪತ್ನಿತ್ವ ಪದ್ಧತಿ ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಲು ಅವಕಾಶ ನೀಡುತ್ತದೆ. ಈ ಎರಡು ಪದ್ಧತಿಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ನಿಷೇಧಿಸಬೇಕೆಂದು ಮನವಿ ಮಾಡಿ ಕೆಲ ಮಹಿಳೆಯರು ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ತ್ರಿವಳಿ ತಲಾಖ್ ನಿಷೇಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಸಂಘಟನೆ (ಬಿಎಂಎಂಎ) ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಬೆಂಬಲ ನೀಡುವುದಾಗಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *