ಮೋದಿಗೆ ತಪ್ಪು ಮಾಹಿತಿ ಕೊಟ್ಟು ಭಾಷಣ ಮಾಡಿಸಲಾಗಿದೆ-ಮೋದಿ ‘ಪಂಚ್’ಗೆ ‘ಕೈ’ ಕೌಂಟರ್

Public TV
2 Min Read

ಬೆಂಗಳೂರು: ಇಂದು ನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಿ ಮೋದಿ ಅವರಿಗೆ ತಪ್ಪು ಮಾಹಿತಿಗಳನ್ನು ನೀಡಿ ಭಾಷಣ ಮಾಡಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ್ಯ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸಮಾವೇಶಕ್ಕೆ ತಿರುಗೇಟು ನೀಡಲೆಂದು ಜಿ.ಪರಮೇಶ್ವರ್ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ಮೋದಿಯವರು ತಮ್ಮ ಒಂದು ಗಂಟೆ ಭಾಷಣದಲ್ಲಿ ಕೆಲವು ಭರವಸೆ ಮಾತು ಟೀಕೆ ಟಿಪ್ಪಣಿ ಮಾಡಿದ್ದಾರೆ. ಕಾಂಗ್ರೆಸ್ ಭ್ರಷ್ಟ ಸರ್ಕಾರ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಸಮಯ ಬಂದಿದೆ ಎಂದು ಮಾತನಾಡಿದ್ದಾರೆ. ಈ ಹಿಂದೆ ಬಿಜೆಪಿ ರಾಜ್ಯದಲ್ಲಿದ್ದಾಗ ಮಾಡಿದ ಬ್ರಷ್ಟಾಚಾರ ಮಾಡಿದ್ದನ್ನು ಮೋದಿ ಮರೆತಿರುವ ಹಾಗಿದೆ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದ ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡಿದ್ದಾರೆ. ರಾಜ್ಯ ಸರ್ಕಾರ 10% ಕಮೀಷನ್ ತೆಗೆದುಕೊಳ್ಳುತ್ತದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರದ ನಂಗಾನಾಚ್ ಆಗ್ತಿದೆ ಎಂದು ಹೇಳುವ ಮೂಲಕ ನಾಡಿನ ಸಮಸ್ತ ಜನತೆಗೆ ಅವಮಾನ ಮಾಡಿದ್ದಾರೆ. ಇದೆಲ್ಲಾ ರಾಜ್ಯ ಬಿಜೆಪಿ ನಾಯಕರು ತಪ್ಪು ಮಾಹಿತಿ ನೀಡಿದ್ದರಿಂದ ಆಗಿದೆ ಅಂತಾ ಜಿ.ಪರಮೇಶ್ವರ್ ಅಂದ್ರು.

ಕೇಂದ್ರ ಸರ್ಕಾರಕ್ಕೆ ಕೌಂಟ್ ಡೌನ್ ಶುರು: ಮೋದಿ ತಮ್ಮ ಭಾಷಣದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕೌಂಟ್ ಡೌನ್ ಆರಂಭವಾಗಿದೆ ಅಂತಾ ಹೇಳಿದ್ದಾರೆ. ಆದ್ರೆ ನಿಜಕ್ಕೂ ಕೇಂದ್ರ ಸರ್ಕಾರದಲ್ಲಿ ಕೌಂಟ್ ಡೌನ್ ಶುರು ಆಗಿದ್ದರ ಬಗ್ಗೆ ಬಜೆಪಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯ ಸರ್ಕಾರ ಅಂದೇ ಕೈ ಬಿಟ್ಟಿದೆ. ಆದ್ರೆ ಮೋದಿಯವರು ಸ್ಟೀಲ್ ಬ್ರಿಡ್ಜ್ ನಲ್ಲಿ ಹಗರಣ ನಡೆದಿದೆ ಅಂತಾ ಹೇಳ್ತಾರೆ, ಪ್ರಧಾನಿಗಳಾಗಿ ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ರು.

ದೇಶದಲ್ಲಿ 4 ಕೋಟಿ ಜನರು ಕಗ್ಗತ್ತಲಿನಲ್ಲಿ ಇದ್ದಾರೆ ಅಂತಾ ಮಾತ್ರ ಹೇಳಿದ್ರು. ಆದ್ರೆ ಉಳಿದ 126 ಕೋಟಿ ಜನರು ಬೆಳಕಿನಲ್ಲಿದ್ದಾರೆ ಎಂಬುದನ್ನು ಹೇಳಲಿಲ್ಲ. ಇದು ಮೋದಿ ಅವರ ಋಣಾತ್ಮಕ ಮನಸ್ಥಿತಿಯನ್ನು ತೋರಿಸುತ್ತದೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ ಕೇಂದ್ರ ಸರ್ಕಾರ 17 ಸಾವಿರ ಕೋಟಿ ಅನುದಾನ ಬಿಡುಗೊಡೆ ಮಾಡಿದ್ದು, ಅದು ಕೇವಲ ಶೇ.20ರಷ್ಟು ಮಾತ್ರ. ಸಬ್ ಅರ್ಬನ್ ಯೋಜನೆಗೆ ರಾಜ್ಯ ಸರ್ಕಾರ ಶೇ.20ರಷ್ಟು ಬಂಡವಾಳವನ್ನು ಹೂಡಿಕೆ ಮಾಡುತ್ತದೆ. ಇನ್ನುಳಿದ ಶೇ.60ರಷ್ಟು ಅನುದಾನವನ್ನು ಇನ್ನೀತರ ಹಣದ ಮೂಲಗಳಿಂದ ಪಡೆಯಲಾಗುತ್ತದೆ. ಎಲ್ಲರೂ ಸೇರಿ ಕೆಲಸವನ್ನು ಮಾಡಿದ್ದೇವೆ ಅಂತಾ ಹೇಳುವ ಬದಲು ಮೋದಿ ನಾವೇ ಮಾಡಿದ್ದೇವೆ ಅಂತಾ ಹೇಳಿಕೊಂಡಿದ್ದಾರೆ ಅಂತಾ ಅಂದ್ರು.

ಮಹದಾಯಿ ವಿಚಾರದಲ್ಲಿ ಮೌನ: ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಭಾಷಣ ಮಾಡಿದ ಮೋದಿ ಅವರು, ಮಹದಾಯಿ ವಿಚಾರದಲ್ಲಿ ಚಕಾರ ಎತ್ತಲಿಲ್ಲ. ದೇಶದ ಪ್ರಧಾನಿಗಳಾಗಿ ಮೂರು ರಾಜ್ಯಗಳ ಸಭೆಯನ್ನು ಕರೆದು ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳಬೇಕು. ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದಲ್ಲಿ ಹೋರಾಟ ಉಗ್ರ ರೂಪ ತಾಳಿದೆ. ಮಹದಾಯಿ ಹೋರಾಟದ ಬಗ್ಗೆ ಮಾತನಾಡದ ಇವರದು ರೈತ ಪರ ಸರ್ಕಾರ ಅಂತಾ ಹೇಳಿಕೊಳ್ಳುತ್ತಾರೆ ಎಂದು ಕುಟುಕಿದರು.

ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ ಅಂತಾ ಹೇಳ್ತಾರೆ. ಆದ್ರೆ ಕರ್ನಾಟಕ ಅಪರಾಧ ನಡೆಯುವ ಟಾಪ್ 10 ರಾಜ್ಯಗಳಲ್ಲಿ ಬರುವುದಿಲ್ಲ. ಬಿಜೆಪಿ ಆಡಳಿತ ಹೊಂದಿರುವ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಅಪರಾಧ ಸಂಖ್ಯೆಗಳು ಹೆಚ್ಚು ನಡೆಯುತ್ತವೆ. ಕೇವಲ ರಾಜಕೀಯ ಉದ್ದೇಶಕ್ಕೆ ಈ ರೀತಿಯ ಹೇಳಿಕೆ ನೀಡುವುದು ರಾಜ್ಯಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂದು ಆಕ್ರೋಶವನ್ನು ಹೊರ ಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *