29 ವರ್ಷದ ಬಳಿಕ ಪಾಕಿಸ್ತಾನದ ಜೈಲಿನಿಂದ ತಾಯಿನಾಡಿಗೆ ಕಾಲಿಟ್ಟ ಕುಲದೀಪ್ ಸಿಂಗ್

Public TV
1 Min Read

ಶ್ರೀನಗರ: ಪಾಕಿಸ್ತಾನದ ಜೈಲಿನಲ್ಲಿ 29 ವರ್ಷಗಳ ಕಾಲ ಬಂಧಿಯಾಗಿದ್ದ ಜಮ್ಮು ಮತ್ತು ಕಾಶ್ಮೀರಾದ ಕುಲದೀಪ್ ಸಿಂಗ್ ತಾಯಿನಾಡು ಭಾರತಕ್ಕೆ ಕಾಲಿಟ್ಟಿದ್ದಾರೆ.

ಔರಂಗಾಬಾದ್‍ನ ಮೊಹಮ್ಮದ್ ಗುಫ್ರಾನ್ ಅವರೊಂದಿಗೆ ಕಥುವಾ ನಿವಾಸಿ 53 ವರ್ಷದ ಕುಲದೀಪ್ ಸಿಂಗ್ ಅವರನ್ನು ಸೋಮವಾರ ಪಾಕಿಸ್ತಾನ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬಳಿಕ ಸಿಂಗ್ ಅವರು ಪಂಜಾಬ್‍ನ ಗುರುನಾನಕ್ ದೇವ್ ಆಸ್ಪತ್ರೆಯಲ್ಲಿರುವ ರೆಡ್‍ಕ್ರಾಸ್ ಭವನವನ್ನು ತಲುಪಿದ್ದು, ನಿನ್ನೆ ರಾತ್ರಿ ತಮ್ಮ ತವರು ಮನೆಗೆ ಹಿಂತಿರುಗಿದ್ದಾರೆ. ಈ ವೇಳೆ ಕಥುವಾದ ಜನರು ಸಿಂಗ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಇದನ್ನೂ ಓದಿ: ಪ್ರಕೃತಿ ಸೌಂದರ್ಯ ಸವಿಯಿರಿ: ಬೆಂಗಳೂರು-ಶಿವಮೊಗ್ಗ ರೈಲಿಗೆ ವಿಸ್ಟಾಡಾಮ್ ಕೋಚ್

ತಮ್ಮ ಅನುಭವದ ಕುರಿತು ಮಾತನಾಡಿದ ಸಿಂಗ್ ಅವರು, 1992 ರಲ್ಲಿ ನಮ್ಮನ್ನು ಬಂಧನಕ್ಕೊಳಪಡಿಸಿದ ನಂತರ ಪಾಕಿಸ್ತಾನಿ ಏಜೆನ್ಸಿಗಳು ಮೂರು ವರ್ಷಗಳ ಕಾಲ ನಮಗೆ ಚಿತ್ರಹಿಂಸೆ ನೀಡಿತ್ತು. ನಂತರ ನಮ್ಮನ್ನು ಬೇಹುಗಾರಿಕೆ ಆರೋಪದ ಮೇಲೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಪರಿಣಾಮ ನಮ್ಮನ್ನು ಅಲ್ಲಿನ ನ್ಯಾಯಾಲಯ 25 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು ಎಂದು ವಿವರಿಸಿದರು.

ನನ್ನ ಎಲ್ಲ ಸ್ನೇಹಿತರಿಗೆ, ಗ್ರಾಮಸ್ಥರಿಗೆ ಮತ್ತು ವಿಶೇಷವಾಗಿ ಯುವಕರಿಗೆ ನನ್ನ ಸಂದೇಶವೆಂದರೆ, ನಿಮ್ಮನ್ನು ಹಾನಿ ಮಾಡುವ ತಪ್ಪು ಮಾರ್ಗಗಳಿಂದ ದೂರವಿರಿ. ಆದರೆ, ದೇಶಕ್ಕಾಗಿ ತ್ಯಾಗ ಮಾಡುವ ಸಂದರ್ಭ ಬಂದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ಹೂ ಮನಸ್ಸಿನ ‘ಅಪ್ಪು’

ಈ ಕುರಿತು ಮಾತನಾಡಿದ ಸಿಂಗ್ ಸಂಬಂಧಿಕರು, ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾದ ನಂತರ, ಲಾಹೋರ್‍ನ ಕೋಟ್ ಲಖ್‍ಪತ್ ಜೈಲಿನಿಂದ ಅವರು ನಮಗೆ ಪತ್ರ ಬರೆದಿದ್ದರು. ಆಗ ಮಾತ್ರ ನಮಗೆ ಅವರು ಎಲ್ಲಿದ್ದಾರೆ ಎಂದು ತಿಳಿಯಿತು. ಈಗ ಮತ್ತೆ ಇವರು ಮನೆಗೆ ವಾಪಸ್ ಆಗಿರುವುದು ನಮಗೆ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *