ಐಟಿ ದಾಳಿಯ ಕೆಲ ಗುಟ್ಟಿನ ವಿಚಾರವನ್ನು ಎರಡು ದಿನವಾದ್ಮೇಲೆ ಹೇಳ್ತೀನಿ- ಸಚಿವ ರೇವಣ್ಣ

Public TV
2 Min Read

ಹಾಸನ: ಜೆಡಿಎಸ್ ಮುಖಂಡರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರ ಬಗ್ಗೆ ಇನ್ನೆರಡು ದಿನ ಆದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಈಗ ಬೇಡ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ತರಕಾರಿ ವ್ಯಾಪಾರಿ, ಇನ್ನೊಬ್ಬ ದಿನಕ್ಕೆ ಅರ್ಧ ಕೆಜಿ ಮಟನ್ ತಿನ್ನುತ್ತಾನೆ. ಮತ್ತೊಬ್ಬನ ಮನೆಯಲ್ಲಿ ಜೆಲ್ಲಿ ಸಿಗಬಹುದು. ಐಟಿ ದಾಳಿ ಬಗ್ಗೆ ನಾನು ಜಿಲ್ಲಾಧಿಕಾರಿಗೆ ಕರೆ ಮಾಡಿದ್ದೆ. ದೇಶದ ಹಣವನ್ನ ಲೂಟಿ ಮಾಡುತ್ತಿದ್ರೆ ಅಂಥವರನ್ನ ಹಿಡಿಯಲಿ. ಐಟಿ ದಾಳಿ ಬಗ್ಗೆ ಇನ್ನು ಎರಡು ದಿನ ಅದ್ಮೇಲೆ ಮಾತನಾಡುತ್ತೇನೆ ಈಗ ಬೇಡ ಅಂದ್ರು.

ನ್ಯಾಯಯುತವಾಗಿ ಐಟಿಯವರು ಕೆಲಸ ಮಾಡಲಿ. ಇದ್ರೆ ತಗೊಂಡು ಹೋಗ್ಲಿ. ಇದು ಬಿಜೆಪಿಗೆ ಅಂತ್ಯ ಕಾಲ. ದೇವೇಗೌಡರಿಗೆ ಯಾರೆಲ್ಲ ತೊಂದರೆ ಕೊಟ್ಟಿದ್ದಾರೆಯೋ ಅವರು ಯಾರೂ ಉಳಿದಿಲ್ಲ. ದಾಳಿಯ ಇನ್ನು ಕೆಲವು ಗುಟ್ಟಿನ ವಿಚಾರವನ್ನ ಎರಡು ದಿನ ಅದ್ಮೇಲೆ ಹೇಳ್ತಿನಿ ಎಂದಿದ್ದಾರೆ.

ದೇವೇಗೌಡರ ಕುಟುಂಬ ಯಾರಿಗೂ ಹೆದರುವುದಿಲ್ಲ. ನಮ್ಮ ಮನೆ ಮೇಲೆ ದಾಳಿ ಮಾಡಿದ್ರು. ಯಾರು ದಾಳಿ ಮಾಡಿದ್ರೋ ಗೊತ್ತಿಲ್ಲ. ಹಾಸ್ಟೆಲ್ ನಲ್ಲಿ ಅಕ್ಕಿ ಮೂಟೆಗಳನ್ನ ಹುಡುಕಿದ್ರು. ಏನಾದ್ರೂ ಸಿಕ್ಕಿದ್ರೆ ತಗೊಂಡು ಹೋಗಲಿ. ಹೋದ ಸರಿ ನನ್ನ ಸೋಲಿಸಬೇಕು ಎಂದು ಮಿಲಿಟರಿ ತಂದರು. ನಾನು ಯಾರಿಗೂ ಹೆದರೋದಿಲ್ಲ. ಮೂರು ಸೂಕ್ಷ್ಮ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅತೀ ಹೆಚ್ಚು ಲೀಡ್ ನಿಂದ ಗೆಲ್ಲುತ್ತದೆ. ಕಾರ್ಯಕರ್ತರನ್ನ ಐಟಿ ದಾಳಿ ಹೆಸರಲ್ಲಿ ಕೂಡಿ ಹಾಕಿಕೊಳ್ಳೋದು ಬೇಡ ಎಂದು ಅವರು ತಿಳಿಸಿದ್ರು

ಮೊನ್ನೆ ಹಾಸನದ ರಿಂಗ್ ರೋಡ್‍ನಲ್ಲಿ 7 ಕೋಟಿ ರೂ. ಹಣ ಬಿಜೆಪಿಗೆ ಹೋಗಿದೆ. ಐಟಿ ಇದೆ ಆದರೂ ಹಣ ಹೋಗಿದೆ. ಅರಕಲಗೂಡಿಗೆ ಹಣ ಹೋಗ್ತಿದೆ ಎಂದು ನಾನು ದೂರು ಕೊಟ್ಟಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹದ್ದು ನಡೆಯುತ್ತಿದೆ ಎಂದು ಆರೋಪಿಸಿದ್ರು.

ಬಿಜೆಪಿಯವರು ರಾಜ್ಯದಲ್ಲಿ ಸುಳ್ಳು ಸುಳ್ಳು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಕಳೆದ 10 ತಿಂಗಳಿನಿಂದ ಕುಮಾರಸ್ವಾಮಿ ಸರ್ಕಾರ ಉತ್ತಮ ಆಳ್ವಿಕೆ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಬಡವರಿಗೆ 7 ಕೆಜಿ ಅಕ್ಕಿ ನೀಡುವ ಯೋಜನೆಯನ್ನ ಮುಂದುವರಿಸುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. ನೀರಾವರಿಗೆ ಅನೇಕ ಯೋಜನೆಗಳನ್ನ ಮಾಡಿಕೊಂಡು ಬಂದಿದ್ದೇವೆ. ಸುಮಾರು 5 ಸಾವಿರ ಕೋಟಿ ಯೋಜನೆಗಳನ್ನ ಮಾಡುತ್ತಿದ್ದೇವೆ. ಬಿಜೆಪಿ ಅವರು ನಮ್ಮ ಬಜೆಟನ್ನು ಹಾಸನ ಬಜೆಟ್, ರಾಮನಗರ ಬಜೆಟ್ ಎಂದು ಹೇಳುತ್ತಾರೆ. ಹೀಗಾಗಿ ಮತ ಕೊಡಿ ಎಂದು ಹೇಳೋಕೆ ಅವರಿಗೆ ಯಾವ ನೈತಿಕತೆ ಇದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಜಿಲ್ಲೆಯಲ್ಲಿ ಪ್ರಜ್ಚಲ್ ರೇವಣ್ಣ 3 ರಿಂದ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಸೆಂಟ್ರಲ್ ಇಂಟಲಿಜೆನ್ಸ್ ರೀಪೋರ್ಟ್ ಇದೆ. ಅದಕ್ಕಾಗಿ ಬಿಜೆಪಿ ಅವರು ತೊಂದರೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ರು.

 

Share This Article
Leave a Comment

Leave a Reply

Your email address will not be published. Required fields are marked *