ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಮಚ್ಚು ಲಾಂಗುಗಳು ಝಳಪಿಸಿವೆ. ಮನೆ ಖಾಲಿ ಮಾಡಿಸಲು ಮಚ್ಚು ಲಾಂಗುಗಳಿಂದ ದಾಳಿ ಮಾಡಿದ ಘಟನೆ ಬಳ್ಳಾರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೌಲಬಜಾರ ಪ್ರದೇಶದ ಗೋಲ್ಡ್ ಸ್ಮಿತ್ ಕಾಲೋನಿಯ ನಿವಾಸಿ ರಘುರಾಮ ಸುಬ್ರಹ್ಮಣ್ಯವರ ಮನೆ ಖಾಲಿ ಮಾಡಿಸಲು ವಕೀಲರೊಬ್ಬರು ಮಚ್ಚು ಲಾಂಗುಗಳಿಂದ ದಾಳಿ ಮಾಡಿಸಿದ್ದಾರಂತೆ. ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು, ಮನೆಯೆಲ್ಲ ಜಖಂಗೊಂಡಿದೆ. ಆದರೂ ಪೊಲೀಸರು ಈ ಬಗ್ಗೆ ಇದೂವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ ಅಂತ ರಘುರಾಮ ಆರೋಪಿಸಿದ್ದಾರೆ.
ರಘುರಾಮರವರು ಕಳೆದ 25 ವರ್ಷಗಳ ಹಿಂದೆ ರಾಜಮ್ಮ ಅವರಿಂದ ಮನೆ ಖರೀದಿಸಿ ಗೋಲ್ಡ್ ಸ್ಮಿತ್ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದರು. ಆದ್ರೆ ರಾಜಮ್ಮರ ವಾರಸುದಾರರಿಂದ ವಕೀಲ ಮೊಹಮ್ಮದ್, ಅದೇ ಮನೆಯನ್ನು ಖರೀದಿ ಮಾಡಿದ್ದರು. ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯವಾದಿ ಮೊಹಮ್ಮದ್ರ ಪರವಾಗಿ ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ರಘುರಾಮ ಸುಬ್ರಹ್ಮಣ್ಯರು ಮೇಲ್ಮನವಿ ಸಲ್ಲಿಸಿದ್ದರೂ ವಕೀಲ ಮೊಹಮ್ಮದ್ ಅವರ ಡೇಂಜರ್ ಗ್ಯಾಂಗ್ ನ ರೌಡಿಗಳಿಂದ ಮನೆ ಖಾಲಿ ಮಾಡಿಸಲು ಮಚ್ಚು ಲಾಂಗುಗಳೊಂದಿಗೆ ದಾಳಿ ಮಾಡಿದ್ದಾರೆ ಅಂತಾ ನೊಂದ ಕುಟುಂಬದವರು ಆರೋಪಿಸುತ್ತಿದ್ದಾರೆ.
ನ್ಯಾಯವಾದಿ ಮೊಹಮ್ಮದ್ ಅವರ ಬೆಂಬಲಿಗರು ಎನ್ನಲಾದ ಕೆಲ ರೌಡಿಗಳು ಮಚ್ಚು ಲಾಂಗುಗಳನ್ನು ಹಿಡಿದು ಮನೆ ಖಾಲಿ ಮಾಡಿಸಲು ಓಡಾಡಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv