ಕರುನಾಡಲ್ಲಿ `45’ ಸಿನಿಮಾ ಅಬ್ಬರ: ಅಡ್ವಾನ್ಸ್‌ ಬುಕ್ಕಿಂಗ್ ಭರ್ಜರಿ ಜೋರು

3 Min Read

ರುನಾಡ ಚಕ್ರವರ್ತಿ ಶಿವರಾಜಕುಮಾರ್ (Shiva Rajkumar), ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ರಾಜ್ ಬಿ ಶೆಟ್ಟಿ ( Raj B. Shetty) ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ 45 ಚಿತ್ರ ಇದೇ ಡಿಸೆಂಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಜೋರಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇತ್ತೀಚೆಗಷ್ಟೇ ನಮ್ಮ ಚಿತ್ರದ ಟ್ರೈಲರ್ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಕಡೆಗಳಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಡುಗಳಿಗೂ ಜನರು ಮನ ಸೋತ್ತಿದ್ದಾರೆ. ನಮ್ಮ ಚಿತ್ರಕ್ಕೆ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಎಲ್ಲರಿಗೂ ಧನ್ಯವಾದ. ನಾನು ಸಿನಿಮಾ ನೋಡಿದ್ದೇನೆ. ನಿರ್ಮಾಪಕನಾಗಿ ನನಗೆ ಬಹಳ ಸಂತೋಷವಾಗಿದೆ. ನಮ್ಮ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಚಿತ್ರ ಬಿಡುಗಡೆಯಾಗುತ್ತಿರುವ ಈ ಸಮಯದಲ್ಲಿ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ್ದ ಪ್ರತಿಯೊಬ್ಬರಿಗೂ ನನ್ಮ ಧನ್ಯವಾದ. ಶಿವರಾಜಕುಮಾರ್ ಅವರಿಗೆ ವಿಶೇಷ ಧನ್ಯವಾದ ಹೇಳಬೇಕು. ಅವರಿಗೆ ಆರೋಗ್ಯದ ಸಮಸ್ಯೆ ಇದ್ದರೂ ಚಿತ್ರಕ್ಕೆ ತೊಂದರೆ ಆಗಬಾರದೆಂದು ತಮ್ಮ ಕೆಲಸಗಳನ್ನು ಪೂರೈಸಿ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದರು. ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಸಹಕಾರ ಕೂಡ ಅಪಾರ. ಅರ್ಜುನ್ ಜನ್ಯ ಅವರು ಮೂರು ವರ್ಷಗಳಿಂದ ನಮ್ಮ ಚಿತ್ರಕ್ಕಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಅವರ ಶ್ರಮ ಸಾರ್ಥಕ ಆಗಿದೆ. ಇನ್ನೂ, ನಮ್ಮ ಚಿತ್ರವನ್ನು ಕರ್ನಾಟಕದಲ್ಲಿ ಕೆ.ವಿ.ಎನ್ ಸಂಸ್ಥೆ ವಿತರಣೆ ಮಾಡುತ್ತಿದೆ. ತಮಿಳುನಾಡು, ಆಂದ್ರಪ್ರದೇಶ ಹಾಗೂ ಕೇರಳದಲ್ಲೂ ಜನಪ್ರಿಯ ಸಂಸ್ಥೆಗಳು ವಿತರಣೆ ಮಾಡುತ್ತಿದೆ. ಉತ್ತರ ಭಾರತದಲ್ಲಿ ಜೀ ಸ್ಟುಡಿಯೋಸ್ ವಿತರಣೆ ಮಾಡುತ್ತಿದ್ದು, ಸಿನಿಮಾದ ಸ್ಯಾಟಲೈಟ್ ರೈಟ್ಸ್ ಕೂಡ ಅದೇ ಜೀಸಂಸ್ಥೆ ತೆಗೆದುಕೊಂಡಿದೆ. ಅವರೆಲ್ಲರಿಗೂ ನಾನು ಆಬಾರಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ. ಇದನ್ನೂ ಓದಿ: ಜ.29-ಫೆ.6ರವರೆಗೆ 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ – ರಾಯಭಾರಿಯಾಗಿ ಪ್ರಕಾಶ್ ರಾಜ್ ಆಯ್ಕೆ

ಅರ್ಜುನ್ ಜನ್ಯ ಅವರು ಮೊದಲು ಕಥೆ ನನಗೆ ಹೇಳಿದ್ದು. ಕಥೆ ಹೇಳಿದ ಹಾಗೆ, ಅದಕ್ಕಿಂತ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ರಮೇಶ್ ರೆಡ್ಡಿ ಅವರು ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ಮಾಡಿದ್ದಾರೆ. ಇದು ಕೇವಲ ನನ್ನ ಸಿನಿಮಾ ಮಾತ್ರ ಅಲ್ಲ. ನಮ್ಮ ಸಿನಿಮಾ. ಉಪೇಂದ್ರ, ರಾಜ್ ಬಿ ಶೆಟ್ಟಿ ಅವರ ಅಭಿನಯ ಹಾಗೂ ಸತ್ಯ ಹೆಗಡೆ ಅವರ ಛಾಯಾಗ್ರಹಣ ಚೆನ್ನಾಗಿದೆ. ಇದೊಂದು ಜೀವನದ ಮೌಲ್ಯವನ್ನು ತಿಳಿಸುವ ಚಿತ್ರ ಎಂದರು ನಟ ಶಿವರಾಜಕುಮಾರ್.

ನಿರ್ಮಾಪಕರನ್ನು ಅಣ್ಣವ್ರು ಅನ್ನದಾತರು ಎಂದು ಕರೆಯುತ್ತಿದ್ದರು. ಆ ಮಾತು ರಮೇಶ್ ರೆಡ್ಡಿ ಅವರಿಗೆ ನಿಜವಾಗಿಯೂ ಒಪ್ಪುತ್ತದೆ. ಅರ್ಜುನ್ ಜನ್ಯ ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಇನ್ನೂ ಶಿವಣ್ಣನಿಗೆ ಶಿವಣ್ಣ ಅವರೆ ಸರಿಸಾಠಿ. ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ಚಿತ್ರ ಡಿಸೆಂಬರ್ 25 ರಂದು ತೆರೆಗೆ ಬರುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದು ನಟ ಉಪೇಂದ್ರ ಹೇಳಿದರು.

ತಮ್ಮ ಮೂರು ವರ್ಷಗಳ ಶ್ರಮವನ್ನು ಈ ಸಿನಿಮಾಗೆ ಹಾಕಿರುವ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಚಿತ್ರವನ್ನು ಬಹಳ ಪ್ರೀತಿಯಿಂದ ನಿರ್ಮಾಣ ಮಾಡಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ನಟ ರಾಜ್ ಬಿ ಶೆಟ್ಟಿ, ಆರೋಗ್ಯದ ಸಮಸ್ಯೆ ಇದ್ದಾಗಲೂ ಚಿತ್ರವನ್ನು ಪೂರ್ಣ ಮಾಡಿದ ಶಿವರಾಜಕುಮಾರ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದ. ಶಿವರಾಜಕುಮಾರ್, ಉಪೇಂದ್ರ ಹಾಗೂ ನಾನು ಮೂವರು ಈ ಚಿತ್ರದಲ್ಲಿ ನಟಿಸಿದ್ದೇವೆ. ಆದರೆ ನಾನು ಎಂದಿಗೂ ಶಿವರಾಜಕುಮಾರ್ ಹಾಗೂ ಉಪೇಂದ್ರ ಅವರ ಅಭಿಮಾನಿ ಎಂದರು ನಟ ರಾಜ್ ಬಿ ಶೆಟ್ಟಿ.

ಕರ್ನಾಟಕದಲ್ಲಿ ಈ ಚಿತ್ರವನ್ನು ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. 24 ರಂದು ಪ್ರೀಮಿಯರ್ ಶೋ ಗಳು ಇರುತ್ತದೆ ಎಂದು ವಿತರಕ ಸುಪ್ರೀತ್ ಹೇಳಿದರು. ಚಿತ್ರದಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ, ಛಾಯಾಗ್ರಾಹಕ ಸತ್ಯ ಹೆಗಡೆ ಹಾಗೂ ವಿ.ಎಫ್.ಎಕ್ಸ್ ಮಾಡಿರುವ ಯಶ್ ಶೆಟ್ಟಿ, ಫರ್ನಸ್ ಇರಾನ್ ಮತ್ತು ತಂಡದವರು “45” ಚಿತ್ರದ ಕುರಿತು ಮಾತನಾಡಿದರು. ಇದನ್ನೂ ಓದಿ: ವಿಜಯ್‌ ದೇವರಕೊಂಡ ನಟನೆಯ ರೌಡಿ ಜನಾರ್ದನ ಟೈಟಲ್ ಗ್ಲಿಂಪ್ಸ್ ರಿಲೀಸ್

Share This Article