ಆದಿತ್ಯ ಶರಣಾಗಿರೋದು ನಾಟಕ, ಬೆಂಗ್ಳೂರಿಗೆ ಬಂದಿದ್ದು ಹೇಗೆ – ಎಚ್‍ಡಿಕೆ ಪ್ರಶ್ನೆ

Public TV
2 Min Read

– ನನ್ನ ಅವಧಿಯಲ್ಲಿ ಈ ರೀತಿ ಆಗಿರಲಿಲ್ಲ
– ಹಿಂದೂಗಳು ಭಯೋತ್ಪಾದಕರಾಗುತ್ತಿದ್ದಾರೆ

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಪೊಲೀಸರಿಗೆ ಶರಣಾಗಿದ್ದನ್ನು ನೋಡಿದರೆ ಇದು ನಾಟಕದಂತೆ ಕಾಣುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಎಚ್‍ಡಿಕೆ, ಆರೋಪಿ ಆದಿತ್ಯ ರಾವ್ ತಾನಾಗೇ ಬಂದು ಶರಣಾಗಿದ್ದಾನೆ ಎಂದು ಹೇಳುತ್ತಿದ್ದಾರೆ. ಆದಿತ್ಯ ಶರಣಾಗಿರೋದು ನಾಟಕೀಯ ಎಂದು ನನಗೆ ಅನಿಸುತ್ತಿದೆ. ಏಕೆಂದರೆ ಪಾಪ ಆದಿತ್ಯ ಮಂಗಳೂರಿನಿಂದ ಡಿಜಿ ಆಫೀಸ್‍ಗೆ ಬಂದು ಶರಣಾಗಿದ್ದಾನೆ ಎಂದರೆ ಇಲ್ಲಿ ಆತನನ್ನು ಕರೆದುಕೊಂಡು ಬಂದವರು ಯಾರು ಎಂದು ಪ್ರಶ್ನಿಸಿದರು. ಆತ ಲಾರಿಯಲ್ಲಿ ಬಂದ ಎಂದು ಕೆಲವರು ಹೇಳುತ್ತಾರೆ. ಆದರೆ ಆತ ಡಿಜಿ ಕಚೇರಿಗೆ ಯಾಕೆ ಬಂದ ಎನ್ನುವುದೇ ನನಗೆ ಕಾಡುತ್ತಿರುವ ಪ್ರಶ್ನೆ ಎಂದು ಹೇಳಿದರು.

ಇದೇ ವೇಳೆ ಈ ಘಟನೆಯಿಂದ ಮುಸ್ಲಿಮರು ಮಾತ್ರ ಭಯೋತ್ಪಾದಕರಾಗ್ತಾರೆ ಎಂದು ಹೇಳುವುದಕ್ಕೆ ಆಗುತ್ತಿಲ್ಲ. ಹಿಂದೂಗಳು ಸಹ ಭಯೋತ್ಪಾದಕರಾಗುವ ವಾತಾವರಣ ಈ ಘಟನೆಯಿಂದ ಗೊತ್ತಾಗುತ್ತಿದೆ. ಬಿಜೆಪಿ ತೀರ್ಥ ಪ್ರಸಾದ ಕೊಡುತ್ತೆ. ಹಿಂದಿನಿಂದ ಭಜರಂಗದಳ ತ್ರಿಶೂಲ ಹಿಡಿದುಕೊಂಡು ಬರುತ್ತೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇಂತಹ ಘಟನೆಗಳು ಆಗಿಲ್ಲ. ಆದರೆ ಈಗ ಇಂತಹ ಘಟನೆ ನಡೆಯುತ್ತಿದೆ. ಇದಕ್ಕೆ ಕಾರಣ ಯಾರು? ಇದನ್ನು ಹೇಗೆ ಸರಿ ಮಾಡುತ್ತೀರಾ ಎಂದು ಕುಮಾರಸ್ವಾಮಿ ಅವರು ಕೆ.ಎಸ್ ಈಶ್ವರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

ಇದು ಬಿಜೆಪಿಯವರ ಸ್ವಯಂಕೃತ ಅಪರಾಧ. ಬಿಜೆಪಿ ಅವರೇ ಸಮಾಜದ ನಡುವೆ ಕಂದಕ ಸೃಷ್ಟಿ ಮಾಡಬೇಡಿ. ನಾನು ಯಾವುದೇ ಸಮಾಜ ಓಲೈಸಲು ಕೆಲಸ ಮಾಡಲ್ಲ. ನಾನು ಕೇವಲ ಜನರ ಪರವಾಗಿ ಧ್ವನಿ ಎತ್ತುತ್ತೇನೆ ಅಷ್ಟೆ. ಎಲ್ಲಾ ಸಮುದಾಯದ ಪರ ನಾನು ಧ್ವನಿ ಎತ್ತಿದ್ದೇನೆ. ಅಷ್ಟೇ ಅಲ್ಲ ಅನ್ಯಾಯ ಆದಾಗಲೆಲ್ಲಾ ನಾನು ಧ್ವನಿ ಎತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ನಮ್ಮ ದೇಶದಲ್ಲಿ ಅನೇಕ ಜನರು ಭಾರತ ಬಿಟ್ಟು ಬೇರೆ ದೇಶಕ್ಕೆ ಕೆಲಸಕ್ಕಾಗಿ ಹೋಗಿದ್ದಾರೆ. ಇಲ್ಲಿ ಕೆಲಸ ಸಿಗದೇ ಇರುವ ಕಾರಣ ಅವರು ಅಲ್ಲಿಗೆ ಹೋಗುತ್ತಾರೆ. ಕೇಂದ್ರ ಈಗ ಸಿಎಎ, ಎನ್‍ಆರ್ ಸಿ ಎಂದು ಹೊರಟಿದೆ. ಆದರೆ ಈಗ ಇದು ಅವಶ್ಯಕತೆ ಇಲ್ಲ. ಮಿಸ್ಟರ್ ಮೋದಿ ನೀವು ಈಗ ಉದ್ಯೋಗದ ಬಗ್ಗೆ ಗಮನ ಕೊಡಿ ಎಂದರು.

ಮಂಗಳೂರಿನಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚಾರಣೆಗೂ ಮುನ್ನ ಪೊಲೀಸರು ಅಣಕು ಪ್ರದರ್ಶನ ಮಾಡುವ ರೀತಿಯಲ್ಲಿ, ಮಂಗಳೂರು ಕಮಿಷನರ್ ಹರ್ಷ ಅಣಕು ಪ್ರದರ್ಶನ ಮಾಡಿ ಜನರಲ್ಲಿ ಆತಂಕ ಹುಟ್ಟಿಸಿದ್ದಾರೆ ಎಂದು ಕುಮಾರಸ್ವಾಮಿ ಮಂಗಳವಾರ ಹೇಳಿಕೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *