ಬೆಂಗಳೂರು: ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ರಂಗನಾಯಕಿ ಚಿತ್ರ ಇದೇ ನವೆಂಬರ್ ಒಂದರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಯಾವ ಸ್ಟಾರ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ಈ ಸಿನಿಮಾ ಏನಾದರೂ ಸೌಂಡು ಮಾಡಿದ್ದರೆ ಅದಕ್ಕೆ ಇದರ ವಿಶಿಷ್ಟವಾದ ಕಥಾ ಹಂದರದ ಕಸುವಲ್ಲದೆ ಬೇರ್ಯಾವ ಕಾರಣವೂ ಇರಲು ಸಾಧ್ಯವಿಲ್ಲ. ಈ ಬಲದಿಂದಲೇ ರಂಗನಾಯಕಿ ಗೋವಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ಗೂ ಹೆಜ್ಜೆಯಿಟ್ಟಿದೆ. ಈ ಮೂಲಕವೇ ಕನ್ನಡದ ಘನತೆಯನ್ನು ಎತ್ತಿ ಹಿಡಿದಿರುವ ಈ ಚಿತ್ರಕ್ಕಾಗಿ ಎಲ್ಲ ವರ್ಗದ ಪ್ರೇಕ್ಷಕರೂ ಕಾತರರಾಗಿದ್ದಾರೆ.
ದಯಾಳ್ ಪದ್ಮನಾಭನ್ ಚಿತ್ರವೆಂದ ಮೇಲೆ ಅದರ ಕಥೆಯೂ ವಿಶೇಷವಾದದ್ದೇ ಎಂಬ ನಂಬಿಕೆ ಎಲ್ಲರಲ್ಲಿಯೂ ಇದೆ. ರಂಗನಾಯಕಿ ಎಂಬ ಶೀರ್ಷಿಕೆಯನ್ನು ದಯಾಳ್ ಯಾವಾಗ ಅನೌನ್ಸ್ ಮಾಡಿದರೋ ಆ ಕ್ಷಣದಿಂದಲೇ ಈ ಸಿನಿಮಾ ಬಗ್ಗೆ ಜನ ಆಕರ್ಷಿತರಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರು ಕಟ್ಟಿಕೊಟ್ಟಿದ್ದ ದೃಷ್ಯಕಾವ್ಯ ರಂಗನಾಯಕಿ. ಅದೇ ಶಿರ್ಷಿಕೆಯನ್ನಿಟ್ಟುಕೊಂಡು ದಯಾಳ್ ಯಾವ ಥರದ ಕಥೆ ಹೇಳಲಿದ್ದಾರೆಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇದು ಅತ್ಯಾಚಾರಕ್ಕೀಡಾದ ಹೆಣ್ಣುಮಗಳೊಬ್ಬಳ ಸುತ್ತ ನಡೆಯೋ ಕಥೆಯೆಂಬುದು ಈಗಾಗಲೇ ಬಯಲಾಗಿದೆ.
ಈ ಕಥೆ ದಯಾಳ್ ಅವರನ್ನು ಕಾಡಿದ್ದು ಕೂಡಾ ಒಂದು ಆಘಾತಕರ ಸನ್ನಿವೇಶದಲ್ಲಿಯೇ. ವರ್ಷಾಂತರಗಳ ಹಿಂದೆ ದೆಹಲಿಯಲ್ಲಿ ನಿರ್ಭಯಾ ಪ್ರಕರಣ ನಡೆದಿತ್ತಲ್ಲಾ? ಅಸಹಾಯಕಳಾಗಿದ್ದ ಹೆಣ್ಣುಮಗಳ ಮೇಲೆ ನಡೆದಿದ್ದ ಭೀಕರ ಅತ್ಯಾಚಾರ ಪ್ರಕರಣ ದೇಶಕ್ಕೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆ ಪ್ರಕರಣ ನಡೆದಾಗಲೇ ದಯಾಳ್ ಅವರೊಳಗೆ ಈ ಕುರಿತಾದ ಕಥೆಯೊಂದನ್ನು ಸಿನಿಮಾ ಮಾಡಬೇಕೆಂಬ ತಪನೆ ಹುಟ್ಟಿಕೊಂಡಿತ್ತು. ಈ ಬಗ್ಗೆ ಸಿನಿಮಾ ಮಾಡಿದರೆ ಅದು ಈ ವರೆಗೆ ಬಂದಿರದ ರೀತಿಯಲ್ಲಿಯೇ ಇರಬೇಕೆಂಬ ನಿರ್ಧಾರಕ್ಕೆ ಬಂದಿದ್ದ ದಯಾಳ್ ವರ್ಷಗಟ್ಟಲೆ ತಯಾರಿ ನಡೆಸಿ ಅದ್ಭುತ ಎಂಬಂಥಾ ಕಥೆಯನ್ನು ರೂಪಿಸಿದ್ದಾರಂತೆ. ನಿರ್ಭಯಾ ಚಾಯೆಯಲ್ಲಿ ರೂಪುಗೊಂಡಿರೋ ರಂಗನಾಯಕಿ ನವೆಂಬರ್ ಒಂದರಂದು ನಿಮ್ಮೆಲ್ಲರೆದುರು ಬರಲಿದ್ದಾಳೆ.