ದಿಶಾ ಆರೋಪಿಗಳ ಎನ್‍ಕೌಂಟರ್- ಪೊಲೀಸರ ದಿಟ್ಟ ಕ್ರಮಕ್ಕೆ ಅದಿತಿ ಸೆಲ್ಯೂಟ್

Public TV
1 Min Read

ಬೆಂಗಳೂರು: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ. ಈ ಬಗ್ಗೆ ನಟಿ ಅದಿತಿ ಪ್ರಭುದೇವ ಕಣ್ಣೀರು ಹಾಕುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ನಟಿ ಅದಿತಿ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಶೇರ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಎಲ್ಲರಿಗೂ ನಮಸ್ಕಾರ. ಇಂದು ನನಗೆ ತುಂಬಾ ತುಂಬಾ ಖುಷಿಯಾಗುತ್ತಿದೆ. ತಲಾತಲಾಂತರದಿಂದ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ ಇತ್ತೀಚೆಗೆ ಪ್ರಿಯಾಂಕಾ ರೆಡ್ಡಿ ಅವರದ್ದು ಒಂದು ಘೋರವಾದ ಸಾವು. ಆ ಸಮಯದಲ್ಲಿ ನನಗೆ ಏನು ಹೇಳಬೇಕು ಎಂದು ತಿಳಿದಿರಲಿಲ್ಲ. ಒಂದು ರೀತಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಭಯ ಶುರುವಾಗಿತ್ತು. ಹೆಣ್ಣಾಗಿ ಹುಟ್ಟಿದ್ದು ತಪ್ಪಾ ಎಂಬ ಪ್ರಶ್ನೆ ಪದೇ ಪದೇ ನನ್ನ ಕಣ್ಣೇದರು ಬರುತ್ತಿದ್ದವು” ಎಂದರು.

ದೈಹಿಕ ಅತ್ಯಾಚಾರ ಮಾತ್ರವಲ್ಲದೇ, ಪ್ರತಿನಿತ್ಯ ಮಾನಸಿಕವಾಗಿ ದೌರ್ಜನ್ಯ ನಡೆಯುತ್ತಲೇ ಇವೆ. ಆದರೆ ಇಂದು ಪ್ರತಿ ಹೆಣ್ಣು ಮಕ್ಕಳ ತಂದೆ-ತಾಯಂದಿರು ಸೇರಿದಂತೆ ಎಲ್ಲರ ಶಾಪ ತಟ್ಟಿತು ಅನ್ನಿಸುತ್ತದೆ. ಅದೇ ಜಾಗದಲ್ಲಿ ಆ ಪಿಶಾಚಿಗಳ ಎನ್‍ಕೌಂಟರ್ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ತುಂಬಾ ಸಂತಸವಾಗಿದೆ. ಇಡೀ ಪೊಲೀಸ್ ತಂಡಕ್ಕೆ ಧನ್ಯವಾದಗಳು ಎಂದು ಪೊಲೀಸರಿಗೆ ಅದಿತಿ ಸೆಲ್ಯೂಟ್ ಮಾಡಿದರು.

ಇದೇ ವೇಳೆ ಇನ್ನೊಂದು ಮಾತು ಹೇಳೋಕೆ ಇಷ್ಟಪಡುತ್ತೇನೆ, ದಯವಿಟ್ಟು ಎಲ್ಲಾ ಹೆಣ್ಣು ಮಕ್ಕಳು ಮತ್ತು ಕುಟುಂಬದವರು ನಮ್ಮ ಸುರಕ್ಷತೆಯನ್ನು ಮೊದಲು ನೋಡಿಕೊಳ್ಳೋಣ. ಯಾಕೆಂದರೆ ನಮ್ಮ ಒಂದು ಸಣ್ಣ ತಪ್ಪಿನಿಂದ ನಮ್ಮ ಇಡೀ ಕುಟುಂಬ ಜೀವನ ಪೂರ್ತಿ ನೋವನ್ನು ಅನುಭವಿಸುತ್ತದೆ. ಹೀಗಾಗಿ ಮೊದಲು ನಾವು ಸುರಕ್ಷಿತವಾಗಿ ಇರೋಣ, ಆಮೇಲೆ ಬೇರೆಯದರ ಬಗ್ಗೆ ಯೋಚನೆ ಮಾಡೋಣ. ಎಲ್ಲಾ ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟು, ನಮ್ಮನ್ನ ಕಾಪಾಡಲು ಸಹಾಯ ಮಾಡುವ ಎಲ್ಲಾ ಹೋರೋಗಳಿಗೂ ಕೋಟಿ ಕೋಟಿ ಧನ್ಯವಾದಗಳು. ಒಂದು ವೇಳೆ ನಮಗೆ ಒಳ್ಳೆಯದು ಮಾಡಲು ಸಾಧ್ಯವಾಗದಿದ್ದರೂ ಕೆಟ್ಟದನ್ನು ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

https://www.instagram.com/p/B5t5CFigQbI/

Share This Article
Leave a Comment

Leave a Reply

Your email address will not be published. Required fields are marked *