ದೇವರ ದಯೆಯಿಂದ ಜೀವನದಲ್ಲಿ ಮತ್ತೆ ಸಿಹಿ ಸುದ್ದಿ ಬಂದಿದೆ: ರಾಧಿಕಾ ಪಂಡಿತ್

Public TV
2 Min Read

ಬೆಂಗಳೂರು: ದೇವರ ದಯೆಯಿಂದ ಜೀವನದಲ್ಲಿ ಮತ್ತೆ ಸಿಹಿ ಸುದ್ದಿ ಬಂದಿದೆ ನಟಿ ರಾಧಿಕಾ ಪಂಡಿತ್ ಹೇಳಿದ್ದಾರೆ.

ಆದಿಲಕ್ಷ್ಮಿ ಪುರಾಣ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾಗ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ದೇವರ ದಯೆಯಿಂದ ಸಿಹಿ ಸುದ್ದಿ ಜೀವನದಲ್ಲಿ ಮತ್ತೆ ಬಂದಿದೆ. ಮತ್ತೊಂದು ಎಡಿಷನ್‍ಗೆ ಕಾಯುತ್ತಿದ್ದೇವೆ. ಎಲ್ಲದ್ದಕ್ಕೂ ಒಂದು ಹಣೆಬರಹ ಅಂತ ಒಂದು ಇರುತ್ತದೆ. ಆಯಿತಲ್ಲ ಇನ್ನೇನು ಎಂದು ಖುಷಿ ವ್ಯಕ್ತಪಡಿಸಿದರು.

ಈ ವೇಳೆ ಯಾಕೆ ಐರಾ ಹೆಸರನ್ನೇ ಇರಿಸಿದ್ದು ಯಾಕೆ ಎಂದು ಕೇಳಿದ್ದಕ್ಕೆ, ಅಭಿಮಾನಿಗಳು ಅನೇಕ ಹೆಸರುಗಳನ್ನು ತಿಳಿಸಿದ್ದರು. ಆದರೆ ಐರಾ ಎನ್ನುವುದು ಐರಾವತಿ ಎಂಬ ದೇವಿಯ ಹೆಸರಾಗುತ್ತದೆ. ಇದು ನಮ್ಮ ಮಗಳಿಗೆ ಸರಿಯಾದ ಹೆಸರು ಅಂತ ಯೋಚನೆ ಮಾಡಿದ್ದೇವು ಎಂದು ಉತ್ತರಿಸಿದರು.

ಮಗಳು ಹುಟ್ಟಿದಾಗ ಎಲ್ಲರೂ ಸಾಮಾನ್ಯವಾಗಿ ಮನೆಗೆ ಲಕ್ಷ್ಮಿ ಬಂದಳು ಅಂತ ಹೇಳುತ್ತಾರೆ. ಹೀಗಾಗಿ ಮಗಳಿಗೆ ಲಕ್ಷ್ಮಿಗೆ ಇರುವ ವಿವಿಧ ಹೆಸರಗಳನ್ನು ತಿಳಿಸಿದುಕೊಂಡು ಐರಾವತಿಯಲ್ಲಿರುವ ಐರಾವನ್ನು ಅಂತಿಮಗೊಳಿಸಿದ್ದೇವು. ಈ ಹೆಸರಿನ ಮೊದಲ ಹಾಗೂ ಕೊನೆಯ ಅಕ್ಷರ ಎ ಆಗಿದೆ. ಎ ಆರ್ ಮಧ್ಯೆ ವೈ ಹಾಗೂ ವೈ ಎ ಮಧ್ಯೆ ಆರ್ ಬರುತ್ತದೆ. ಅಷ್ಟೇ ಅಲ್ಲದೆ ಅಪ್ಪ ಯಶ್ (ಎವೈ), ರಾಧಿಕಾ ಅಮ್ಮ (ಆರ್ ಎ) ಅಂತ ಈ ಹೆಸರು ತಿಳಿಸುತ್ತದೆ ಎಂದರು.

ನಾಮಕರಣಕ್ಕೆ ಹೆಚ್ಚು ಸಮಯ ತೆಗೆದುಕೊಂಡಿದ್ದು ಯಾಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಾಧಿಕಾ ಪಂಡಿತ್ ಅವರು, ಮಗಳು ಬೆಳೆದು ದೊಡ್ಡವಳಾದ ಮೇಲೆ ಏನು ಎಂತಹ ಹೆಸರು ಇಟ್ಟಿದ್ದೀರಿ ಅಂತ ಬೈಬಾರದು ಅದಕ್ಕೆ ಯೋಚಿಸಿ, ಮುದ್ದಾದ ಹೆಸರು ಇಟ್ಟಿದ್ದೇವೆ. ಈ ಹೆಸರಲ್ಲಿ ಅಪ್ಪ ಅಮ್ಮ ಇಬ್ಬರು ಇದ್ದೇವೆ. ಅಷ್ಟೇ ಅಲ್ಲ ಹೆಸರು ಶಾರ್ಟ್ ಆಂಡ್ ಸ್ವೀಟ್ ಆಗಿದೆ ಎಂದು ಹೇಳಿ ನಕ್ಕಿದರು.

ರಾಧಿಕಾ ಪಂಡಿತ್ ಅವರು 4 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಯಶ್ ಅವರೇ ಇಂದು ಸಂಜೆ ತಮ್ಮ ಮಗಳ ವಿಡಿಯೋ ಮೂಲಕ ತಂದೆಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇದೇ 23ರಂದು ಯಶ್ ದಂಪತಿ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ತಮ್ಮ ಎರಡನೇ ಮಗುವಿನ ಆಗಮನದ ಬಗ್ಗೆ ಯಶ್ ಅವರು ಎಲ್ಲರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

ವೈಜಿಎಫ್ ಚಾಪ್ಟರ್ 2, ಮತ್ತೊಂದು ಸಿಹಿ ಸುದ್ದಿ ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಮಗಳ ವಿಡಿಯೋ ಮೂಲಕ ಈ ಸಿಹಿ ಸುದ್ದಿಯನ್ನು ಯಶ್ ಹಂಚಿಕೊಂಡಿದ್ದಾರೆ.

ಭಾನುವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ನಡೆದ ಅದ್ಧೂರಿ ನಾಮಕರಣ ಸಮಾರಂಭದಲ್ಲಿ ಯಶ್ ರಾಧಿಕಾ ದಂಪತಿ ತಮ್ಮ ಮುದ್ದಾದ ಮಗಳಿಗೆ `ಐರಾ’ ಎಂದು ಹೆಸರಿಟ್ಟಿದ್ದರು. ಯಶ್ ಹಾಗೂ ರಾಧಿಕಾ ಹೆಸರಿನ ಅಕ್ಷರಗಳನ್ನು ಜೋಡಿಸಿ ಈ ಹೆಸರಿಟ್ಟಿರುವುದು ಒಂದು ವಿಶೇಷವಾದರೆ ಇದರ ಅರ್ಥ ಇನ್ನೊಂದು ವಿಶೇಷತೆ ಹೊಂದಿದೆ. ಅರೇಬಿಕ್‍ನಲ್ಲಿ ‘ಐರಾ’ ಎಂದರೆ `ಕಣ್ಣು ತೆರೆಸುವವರು’ ಅಥವಾ `ಗೌರವಾನ್ವಿತರು’ ಎನ್ನುವ ಅರ್ಥ ಬರುತ್ತದೆ. ಕನ್ನಡದಲ್ಲಿ ‘ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ’ ಎನ್ನುವ ಅರ್ಥ ಬರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *