ಚಿಕ್ಕಬಳ್ಳಾಪುರ: ಸ್ಯಾಂಡಲ್ವುಡ್ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಗೌಡ ಚಿಕ್ಕಬಳ್ಳಾಪುರ ನಗರ ಹೊರವಲಯದ ಶ್ರೀ ವಿರಾಂಜನೇಯನ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಆದಿಚುಂಚನಗಿರಿ ಶಾಖಾ ಮಠದ ಉಸ್ತುವಾರಿಯಲ್ಲಿರುವ ಸೂಲಾಲಪ್ಪನದಿನ್ನೆ ಶ್ರೀ ವೀರಾಂಜನೇಯ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಕ್ತಿಭಾವದಿಂದ ಇಷ್ಟಾರ್ಥಸಿದ್ದಿಗಾಗಿ ಅಮೂಲ್ಯ ದಂಪತಿ ಬೇಡಿಕೊಂಡರು. ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಿರಾಂಜನೇಯನಿಗೆ ವಿಶೇಷ ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಇದೇ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಅಮೂಲ್ಯ ಹಾಗೂ ಜಗದೀಶ್ ಗೌಡ ದಂಪತಿಗೆ ಗೌರವ ಸಮರ್ಪಣೆ ಮಾಡಿ ಆಶೀರ್ವಾದಿಸಿದರು. ನಂತರ ಅಗಲಗುರ್ಕಿ ಗ್ರಾಮದ ಬಳಿಯ ಬಿಜಿಎಸ್ ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ದಿನಾಚರಣೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಗೌಡ ಪಾಲ್ಗೊಂಡಿದ್ದರು.
ಇನ್ನೂ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ದಿನಾಚರಣೆಯ ಅಂಗವಾಗಿ ಬಿಜಿಎಸ್ ಶಾಲೆಯ ಕಲರ್ ಫುಲ್ ರಂಗೇರಿತ್ತು. ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ವಿದ್ಯಾರ್ಥಿಗಳು ಜಾನಪದ ಕಲಾ ತಂಡಗಳೊಂದಿಗೆ ಅತಿಥಿಗಳಿಗೆ ಅದ್ಧೂರಿ ಸ್ವಾಗತ ಕೋರಿದ್ರು. ನಟಿ ಅಮೂಲ್ಯ ಕಂಡ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸಗೊಂಡರು. ಇನ್ನೂ ವಿದ್ಯಾರ್ಥಿಗಳು ವೇಷಭೂಷಣ ಹಾಗೂ ನೃತ್ಯ ಕಂಡ ನಟಿ ಅಮೂಲ್ಯ ದಂಪತಿ ಕೂಡ ಅಷ್ಟೇ ಸಂತಸಗೊಂಡರು.