ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ

Public TV
2 Min Read

ಬೆಂಗಳೂರು: ಕಳೆದ ಗುರುವಾರ ನಟಿ ಅಮೃತಾ ನಾಯ್ಡು ಅವರು ಅಪಘಾತದಲ್ಲಿ ತಮ್ಮ ಮಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಈ ದುಃಖದ ನಡುವೆಯೇ ಅಮೃತಾ ಅವರು ಮನವಿ ಮಾಡಿಕೊಂಡಿದ್ದಾರೆ.

ಹೌದು. ಅಮೃತಾ ನಾಯ್ಡು ಅವರ ಮನವಿ ಕೇಳಿದರೆ ಎಂಥವರ ಕರುಳು ಕೂಡ ಚುರುಕ್ ಅನ್ನಿಸುವಂತಿದೆ. ಮಗಳ ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ಹಾಕಿದ್ದಾರೆ. ಇದರಲ್ಲಿ ನನ್ನ ಆಸೆ ಈಡೇರಿಸಿ ಎಂದು ಅಂಗಲಾಚಿಕೊಂಡಿರುವುದು ಕಣ್ಣೀರು ತರಿಸುವಂತಿದೆ.

ಪೋಸ್ಟ್ ನಲ್ಲೇನಿದೆ..?
ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಲ್ಲಿ ನನ್ನದೊಂದು ಪ್ರಾರ್ಥನೆ. ನಾನು ಈಗ 4 ತಿಂಗಳ ಗರ್ಭಿಣಿ. ಮತ್ತೆ ನನ್ನ ಮುದ್ದು ಕಂದಮ್ಮ ಸಮನ್ವಿಯ ಬರುವಿಕೆಗಾಗಿ ಈ ತಾಯಿ ಜೀವ ಹಂಬಲಿಸುತ್ತಿದೆ. ದಯಮಾಡಿ ನನಗೊಂದು ಸಹಾಯ ಮಾಡಿ. ಆ ಭಗವಂತನಲ್ಲಿ ಪ್ರಾರ್ಥಿಸಿ, ನಿಮ್ಮೆಲ್ಲರ ಪ್ರಾರ್ಥನೆಯ ಒತ್ತಾಯದಿಂದಾರೂ ನನ್ನ ಕಂದಮ್ಮನನ್ನು ಆ ಭಗವಂತ ಮರಳಿ ಕಳಿಸಿಬಿಡಲಿ. ಅವಳನ್ನು ನನ್ನ ಗರ್ಭದಲ್ಲಿ ಜೋಪಾನ ಮಾಡಿಕೊಳ್ಳುತ್ತೇನೆ. ದಯಮಾಡಿ ಈ ತಾಯಿ ಕರೆಗೆ ಕೈಜೋಡಿಸಿ, ನನ್ನ ಸಮನ್ವಿಯ ಪುನಃ ಬರುವಿಕೆಗಾಗಿ ಸಹಾಯ ಮಾಡಿ, ಪ್ರಾರ್ಥಿಸಿ. ಅವಳೇ ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ. ಅವಳು ಮರಳಿ ಬರಲಿ ಎಂದು ದಯವಿಟ್ಟು ಎಲ್ಲರೂ ಪ್ರಾರ್ಥನೆ ಮಾಡಿ ಅಂತ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಂದು ಪುಟಾಣಿ ಸಮನ್ವಿಯ ಅಸ್ಥಿ ವಿಸರ್ಜನೆ

ಗುರುವಾರ ಕೋಣನ ಕುಂಟೆ ಬಳಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ನಡೆಯಿತು. ಈ ಅವಘಡದಲ್ಲಿ ನನ್ನಮ್ಮ ಸೂಪರ್‌ ಸ್ಟಾರ್‌ ಖ್ಯಾತಿಯ ಸಮನ್ವಿ ಮೃತಪಟ್ಟಿದ್ದಾಳೆ. ತಾಯಿ ಅಮೃತಾ ನಾಯ್ಡು ಸಣ್ಣ-ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು. ಶನಿವಾರ ಬನಶಂಕರಿ ಚಿತಾಗಾರದಲ್ಲಿ ಸಮನ್ವಿ ಅಂತ್ಯಕ್ರಿಯೆ ನಡೆಯಿತು. ಈ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.

ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪಶ್ಚಿಮ ವಾಹಿನಿಯಲ್ಲಿ ಅಸ್ಥಿವಿಸರ್ಜನೆ ನಡೆಯಿತು. ಕಾವೇರಿ ನದಿಯಲ್ಲಿ ಸಮನ್ವಿ ತಂದೆ ರೂಪೇಶ್ ನಾಯ್ಡು ವಿಧಿವಿಧಾನಗಳನ್ನು ಪೂರೈಸಿದರು. ವೈದಿಕ ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ನಡೆದ ಕೈಂಕರ್ಯ ನಡೆಯಿತು. ತಿರ ತರ್ಪಣ, ನಾರಾಯಣ ಬಲಿ, ಪಿಂಡ ಪ್ರದಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡಯಿತು. ಅಂತಿಮ ವಿಧಿ-ವಿಧಾನ ಕಾರ್ಯದಲ್ಲಿ ಸಮನ್ವಿ ತಾತ ನಾರಾಯಣಸ್ವಾಮಿ, ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *