ಇವತ್ತಿನ ತೀರ್ಪು ನ್ಯಾಯಯುತವಾಗಿದೆ: ನಟಿ ತಾರಾ

Public TV
1 Min Read

ಗದಗ: ಶಾಲೆಯಲ್ಲಿ ಎಲ್ಲವನ್ನು ಸಮನಾಗಿ ಕಾಣುವುದೇ ಸಮವಸ್ತ್ರ. ಇವತ್ತಿನ ತೀರ್ಪು ನ್ಯಾಯಯುತವಾಗಿದೆ ಎಂದು ಚಿತ್ರನಟಿ ತಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಜಬ್ ತೀರ್ಪು ಕುರಿತಂತೆ ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ನಮ್ಮ ಜಾತಿ, ಧರ್ಮ ಆಚರಣೆ ಮಾಡಲಿ. ಎಲ್ಲಾ ಜಾತಿ ಧರ್ಮ ಒಗ್ಗೂಡಿ ಹೋಗುವುದು ಅಂದರೆ ಅದೇ ಭಾರತ ದೇಶ. ಶಾಲೆಯಲ್ಲಿ ಸಮವಸ್ತ್ರ ಅಂದರೆ ಬಡವ, ಶ್ರೀಮಂತ, ಜಾತಿ ಮತ ಬೇಧ ಏನೂ ಇಲ್ಲದೆ ಕೂತು ಪಾಠ ಕಲಿಯುವ ಒಂದು ದೇವಾಲಯವಾಗಿದೆ. ಒಂದು ದೇವಾಲಯದಲ್ಲಿ ಜಾತಿ-ಧರ್ಮ ಪಾಲಿಸಬಾರದು. ಶಾಲೆಯಲ್ಲಿ ಎಲ್ಲವನ್ನು ಸಮನಾಗಿ ಕಾಣುವುದೇ ಸಮವಸ್ತ್ರ. ಇವತ್ತಿನ ತೀರ್ಪು ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರ ಪ್ರಚೋದನೆ ಮಾತುಗಳನ್ನು ಕೇಳ್ಬೇಡಿ, ನಿಮಗೆ ನಿಮ್ಮ ಭವಿಷ್ಯ ಮುಖ್ಯ: ರೇಣುಕಾಚಾರ್ಯ

ಇದೇ ವೇಳೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಂತೆ ಪ್ರತಿಕ್ರಿಯಿಸಿದ ಅವರು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದೆ. ಹಿಂದೂ ರಾಷ್ಟ್ರ ಎಂದು ಇಡೀ ಪ್ರಪಂಚದಲ್ಲಿ ಇರುವ ಏಕೈಕ ರಾಷ್ಟ್ರ ಭಾರತ. ಈಗಲೂ ನಾವು ಎಚ್ಚೆತ್ತುಕೊಳ್ಳದೇ ಹೋದರೆ ನಮಗೆ ಕಾಶ್ಮೀರದ ಒಂದು ಘೋರವಾದ ನಿಜ ಇಡೀ ರಾಷ್ಟ್ರಕ್ಕೆ ಹಬ್ಬುತ್ತಿತ್ತೇನೋ.. ಸದ್ಯ ನಮ್ಮ ಪುಣ್ಯ ನಾವು ಎಚ್ಚೆತ್ತುಕೊಂಡಿದ್ದೇವೋ ಎನಿಸುತ್ತದೆ. ಇಂದಿಗೂ ಸಹ ಮಹಿಳೆಯ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡಿದರೆ, ನಾವು ಇನ್ನೂ ಸಂಪೂರ್ಣವಾಗಿ ಎಚ್ಚೆತ್ತುಕೊಳ್ಳಬೇಕು ಅನಿಸುತ್ತದೆ. ದಯವಿಟ್ಟು ಸಿನಿಮಾವನ್ನು ರಾಜಕೀಯ ಮಾಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

ಸಿನಿಮಾ ಎನ್ನುವುದು ಒಂದು ಕಲೆ. ಸಾಹಸ, ಸಂಗೀತ, ನೃತ್ಯ, ಮಾತುಕತೆ, ಸತ್ಯ ಎಲ್ಲವೂ ಒಂದುಗೂಡಿದರೆ ಸಿನಿಮಾವಾಗುತ್ತದೆ. ಕಲೆಗೆ ಎಲ್ಲರನ್ನು ಒಟ್ಟಿಗೆ ಕೂರಿಸಿಕೊಂಡು ಒಟ್ಟಿಗೆ ಕರೆದುಕೊಂಡು ಹೋಗುವ ದೊಡ್ಡ ಶಕ್ತಿ ಇದೆ. ಸಿನಿಮಾಕ್ಕೆ ಜಾತಿ, ಮತ, ಧರ್ಮ, ರಾಜಕೀಯವನ್ನು ಸೇರಿಸಬೇಡಿ. ದಿ ಕಾಶ್ಮೀರ್ ಫೈಲ್ಸ್ ರಾಜಕೀಯ ಸಿನಿಮಾವಲ್ಲ. ಇದೊಂದು ಸತ್ಯ ಘಟನೆಗಳ ಬಿಚ್ಚಿಟ್ಟ ಸಿನಿಮಾವಾಗಿದೆ. ಯಾವುದೇ ರೀತಿಯ ಸುಳ್ಳನ್ನು ತೋರಿದೇ, ಯಾವುದನ್ನು ಹೆಚ್ಚಿಗೆ ತೋರಿಸದೇ ಆ ಕ್ಷಣದಲ್ಲಿ ಏನು ನಡೆದಿದೆ ಅದನ್ನು ಮಾತ್ರ ಸಿನಿಮಾದಲ್ಲಿ ಬಿಚ್ಚಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *