ನಾನು ತಪ್ಪು ಮಾಡಿದ್ದೇನೆ – ಐಟಿ ವಿಚಾರಣೆ ಬಳಿಕ ನಗುಮುಖದಿಂದ ಉತ್ತರಿಸಿದ ಸುದೀಪ್

Public TV
2 Min Read

ಬೆಂಗಳೂರು: ನಾನು ಅಳಿಲಿನಷ್ಟು ತಪ್ಪು ಮಾಡಿದ್ದೇನೆ. ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದಕ್ಕೆ ಇದೊಂದು ಎಚ್ಚರಿಕೆ ಎಂದು ಆದಾಯ ತೆರಿಗೆ ವಿಚಾರಣೆಗೆ ಹಾಜರಾದ ಬಳಿಕ ನಟ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ಕ್ವೀನ್ಸ್ ರಸ್ತೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ಹಾಜರಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯಕ್ಕೆ ಐಟಿ ವಿಚಾರಣೆ ಮುಗಿಯುದಿಲ್ಲ. ಇನ್ನೂ 5-6 ತಿಂಗಳು ವಿಚಾರಣೆ ನಡೆಯುತ್ತದೆ. ನಾವು ಐಟಿ ದಾಳಿ ನಡೆದಾಗ ಹೇಳಿಕೆ ಕೊಟ್ಟು ಸಹಿ ಮಾಡಿದ್ದೇವೆ. ಅದರ ಬಗ್ಗೆ ಮಾತನಾಡಲು ಅಧಿಕಾರಿಗಳು ಕರೆದಿದ್ದು, ಒಂದು ವೇಳೆ ನೀವೇನಾದರೂ ನೀವು ಕೊಟ್ಟ ಹೇಳಿಕೆಯನ್ನು ಬದಲಾಯಿಸಿಕೊಳ್ಳುತ್ತೀರಾ ಎಂದು ಕೇಳಿ ಮತ್ತೆ ಅದನ್ನು ಮರು ಪರಿಶೀಲನೆ ಮಾಡಿ ಖಚಿತ ಪಡಿಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: 40 ಕೋಟಿ ರೂ. ಸಾಲ : ಪ್ರಶ್ನೆಗೆ ಯಶ್ ಖಡಕ್ ಪ್ರತಿಕ್ರಿಯೆ

ಐಟಿ ದಾಳಿ ನಡೆದಾಗ ಪೈಲ್ವಾನ್ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ಅದೇ ವಾರ ಬರಲು ಸಾಧ್ಯವಾಗಲಿಲ್ಲ. ಅಂದು ನಮ್ಮ ತಾಯಿ ಒಬ್ಬರೇ ಇದ್ದರು ಎಂದು ನಾನು ಬಂದಿದ್ದೆ. ಇವತ್ತು ಕೂಡ ಸೈರಾ ಶೂಟಿಂಗ್ ಇತ್ತು. ಆದರೆ ಅವರ ಬಳಿಕ ಅವಕಾಶ ಕೇಳಿಕೊಂಡು ಬಂದಿದ್ದೇನೆ. ಸದ್ಯಕ್ಕೆ ಇವತ್ತಿನ ವಿಚಾರಣೆ ಮುಗಿಯಿತು. ಅಗತ್ಯವಿದ್ದಾಗ ಅಧಿಕಾರಿಗಳು ವಿಚಾರಣೆಗೆ ಮತ್ತೆ ಕರೆಯುತ್ತಾರೆ. ಅವರು ವಿಚಾರಣೆಗೆ ಕರೆದರೆ ನಾನು ಬರುತ್ತೇನೆ. ಇವತ್ತೇ ಮುಗಿಯುವಂತಹ ವಿಚಾರ ಅಲ್ಲ ಎಂದು ಸುದೀಪ್ ಹೇಳಿದರು.

ಐಟಿ ಅಧಿಕಾರಿಗಳು ನಮ್ಮ ಮನೆಗೆ ರೇಡ್ ಮಾಡಲು ಬಂದಿಲ್ಲ. ಸರ್ಚ್ ಮಾಡಲು ಬಂದಿದ್ದರು. ಅದನ್ನು ನಾನು ರಿ ಕನ್ಪರ್ಮೇಷನ್‍ಗೆ ಬಂದಿದ್ದೆ. ಐಟಿ ಅಧಿಕಾರಿಗಳು ನಾವು ಮಾಡಿದ ತಪ್ಪಿಗೆ ನಮ್ಮ ಮನೆಗೆ ಸರ್ಚ್ ಮಾಡಲು ಬರುತ್ತಾರೆ. ತಪ್ಪೇ ಮಾಡದೇ ಆಮಂತ್ರಣ ಕೊಡೋದಕ್ಕೆ ಅವರು ಬರುವುದಿಲ್ಲ. ನಾನು ಅಳಿಲಿನಷ್ಟು ತಪ್ಪು ಮಾಡಿದ್ದೇನೆ. ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದಕ್ಕೆ ಇದೊಂದು ಎಚ್ಚರಿಕೆ. ಆದರೆ ಯಾರು ಬೇಕೆಂದು ತಪ್ಪು ಮಾಡುವುದಿಲ್ಲ. ಈ ಎಚ್ಚರಿಕೆಯಿಂದ ನಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳಬೇಕು ಎಂದು ಸುದೀಪ್ ಹೇಳಿದರು.

ಬೇರೆ ನಟರು ಹೇಳಿಕೆ ಕೊಡಲು ಹಿಂಜರಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರ ಜೀವನದಲ್ಲಿ ಇರುವುದಿಂದ ಎಲ್ಲರು ಪ್ರಶ್ನೆ ಮಾಡುತ್ತಾರೆ. ಇದರಿಂದ ಹಿಂಜರಿಯುವುದರಿಂದ ತಪ್ಪು ಸಂದೇಶ ಹೋಗುತ್ತದೆ. ಅವರುಗಳಿಗೆ ಏನು ಸಮಸ್ಯೆ, ಕಿರಿಕಿರಿ ಆಗಿದೆ ಗೊತ್ತಿಲ್ಲ. ಅವರ ಸ್ಥಾನದಲ್ಲಿ ನಾನು ನಿಂತು ಹೇಳಲು ಸಾಧ್ಯವಿಲ್ಲ. ನನ್ನ ಪರ ಅವರು, ಅವರ ಪರ ನಾನು ಮಾತನಾಡಲು ಆಗುವುದಿಲ್ಲ. ಪ್ರತಿಯೊಬ್ಬರು ನಮ್ಮ ಜೀವನದ ಜವಾಬ್ದಾರಿ ತೆಗೆದುಕೊಳ್ಳೋಣ. ಬೇರೆಯವರ ಜೀವನದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುವುದು ಬೇಡ, ಅವರು ನನ್ನ ಜೀವನದ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ ಎಂದರು.

ನಾನು ಸ್ಪಷ್ಟವಾಗಿ ಇದ್ದೇನೆ ಮಾತನಾಡುತ್ತೇನೆ. ಅವರು ಕೂಡ ಸ್ಪಷ್ಟವಾಗಿದ್ದರೆ ಮಾತನಾಡುತ್ತಾರೆ. ನಾವು ಇನ್ನೊಬ್ಬರ ಪರ ಮಾತನಾಡುವುದು, ಅವರು ಮಾಡಿದ್ದು ತಪ್ಪು ಎಂದು ನಾವು ಹೇಳುವುದು ತಪ್ಪಾಗುತ್ತದೆ. ಆದ್ದರಿಂದ ಬೇರೆಯವರ ಬಗ್ಗೆ ನಾವು ಮಾತನಾಡುವುದು ಸರಿಯಿಲ್ಲ ಎಂದು ನಟ ಸುದೀಪ್ ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *