ಇತ್ತೀಚೆಗಷ್ಟೇ ಗೌರವ ಡಾಕ್ಟರೇಟ್ ಗೆ ಪಾತ್ರರಾಗಿದ್ದ ನಟ ರಮೇಶ್ ಅರವಿಂದ್ (Ramesh Aravind) ಅವರಿಗೆ ಇದೀಗ ಮತ್ತೊಂದು ಗೌರವ ಅರಸಿಕೊಂಡು ಬಂದಿದೆ. ಉಡುಪಿಯ ಕೋಟ ತಟ್ಟು ಗ್ರಾಮ ಪಂಚಾಯತ್ ನೀಡುವ ಕಾರಂತ ಹುಟ್ಟೂರು ಪ್ರಶಸ್ತಿಗೆ ರಮೇಶ್ ಅರವಿಂದ್ ಅವರನ್ನು ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 10 ರಂದು ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ (Award) ಪ್ರದಾನ ಮಾಡಲಾಗುತ್ತಿದೆ. ಕಳೆದ ಹದಿನೇಳು ವರ್ಷಗಳಿಂದ ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೀಡಲಾಗುತ್ತಿದೆ. ರಮೇಶ್ ಅರವಿಂದ್ ಅವರ ವ್ಯಕ್ತಿತ್ವ ವಿಕಾಸನ ನಿರೂಪಣೆ ಮತ್ತು ನಟನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುವುದು.
ಕೋಟತಟ್ಟು ಗ್ರಾಮ ಪಂಚಾಯತ್ , ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.)ಕೋಟದ ಸಹಭಾಗಿತ್ವದಲ್ಲಿ ಕಳೆದ ಹದಿನೇಳು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದೆ. ಇಂದು ನಡೆದ ಸಭೆಯಲ್ಲಿ ರಮೇಶ್ ಅರವಿಂದ್ ಹೆಸರನ್ನ ಆಯ್ಕೆ ಮಾಡಲಾಯಿತು. ಈ ಹಿಂದೆ ವೀರಪ್ಪ ಮೊಯ್ಲಿ, ಜಸ್ಟಿಸ್ ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಶ್ರೀಮತಿ ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ | ಬಿ. ಎಂ ಹೆಗ್ಡೆ, ಪ್ರಕಾಶ್ ರೈ, ಶ್ರೀಪಡ್ರೆ, ಕವಿತಾ ಮಿಶ್ರ, ನಾಡೋಜ ಡಾ.ಎಸ್.ಎಲ್.ಭೈರಪ್ಪ , ಗಿರೀಶ್ ಭಾರದ್ವಜ್ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ಒಲಿದಿತ್ತು. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು
ಕೋಟ ಶಿವರಾಮ ಕಾರಂತ (Shivaram Karanth) ಹುಟ್ಟೂರ ಪ್ರಶಸ್ತಿ 2022ರ ಸಾಲಿನಲ್ಲಿ ಹಲವು ದಶಕಗಳಿಂದ ಚಲನಚಿತ್ರ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ನಟ, ನಿರ್ದೇಶಕ, ನಿರೂಪಕ, ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದು ಕೀರ್ತಿ ಗಳಿಸಿದ ಡಾ.ರಮೇಶ್ ಅರವಿಂದ್ ಅವರ ಸರಳ, ಸವ್ಯಸಾಚಿ ವ್ಯಕ್ತಿತ್ವ , ಸಾಧನೆ ಪರಿಗಣಿಸಿ ಈ ವರ್ಷ ಅವರನ್ನು ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ)ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ಮಾಹಿತಿ ನೀಡಿದ್ದಾರೆ.
ಆಯ್ಕೆ ಸಮಿತಿ ಸಭೆಯಲ್ಲಿ ಕೋಟ (Kota) ತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಆಯ್ಕೆ ಸಮಿತಿ ಸದಸ್ಯ ಯು.ಎಸ್ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಪಿ.ಡಿ.ಓ ಶ್ರೀ ಜಯರಾಮ್ ಶೆಟ್ಟಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.