ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್ – ಅಂಧ ಸೋದರಿಯರಿಗೆ ಮನೆ ರೆಡಿ

Public TV
2 Min Read

ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಾವು ಕಷ್ಟದಲ್ಲಿರುವವರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆ. ಇದೀಗ ಅಂಧ ಸಹೋದರಿಯರಿಗೆ ಕೊಟ್ಟ ಮಾತಿನಂತೆ ಜಗ್ಗೇಶ್ ಅವರಿಗೆ ಮನೆಗೆ ಕಟ್ಟಿಸಿಕೊಟ್ಟಿದ್ದಾರೆ.

ಜಗ್ಗೇಶ್ ಮನೆ ಕೆಲಸ ಸಂಪೂರ್ಣವಾಗಿರುವ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಗೃಹ ಪ್ರವೇಶಕ್ಕೆ ತಮ್ಮ ಪತ್ನಿ ಪರಿಮಳ ಜೊತೆ ಹೋಗುತ್ತಿದ್ದಾರೆ. ಅಭಿಮಾನಿಗಳು ಗೃಹ ಪ್ರವೇಶಕ್ಕೆ ಬರಲಿರುವ ಜಗ್ಗೇಶ್ ಮತ್ತು ಪರಿಮಳ ಅವರ ಹೆಸರಿನಲ್ಲಿ ಬ್ಯಾನರ್ ಮಾಡಿಸಿ ಹಾಕಿದ್ದಾರೆ. ಆ ವಿಡಿಯೋವನ್ನು ಜಗ್ಗೇಶ್ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಜೊತೆಗೆ “ಅಂಧ ಪ್ರತಿಭೆಗಳಿಗಾಗಿ ನಿರ್ಮಿಸಿರುವ ನೂತನ ಗೃಹದ ಕೀಲಿ ಕೈಗೊಪ್ಪಿಸಲು ಮಾರ್ಚ್ 12ರಂದು ನಾನು ಮಡದಿ ಪರಿಮಳ ಹೋಗುತ್ತೇವೆ. ತಿಂಗಳಲ್ಲಿ ನನ್ನ ಭಾವನೆ ಕಾರ್ಯರೂಪಕ್ಕೆ ತಂದು ಮುಗಿಸಿದ ನನ್ನ ಆತ್ಮೀಯ ಕೊರಟಗೆರೆ ಅಬಿಮಾನಿ ಸಂಘದ ರವಿ, ಮಲ್ಲಣ್ಣ ಮತ್ತು ಮಿತ್ರರಿಗೆ ಧನ್ಯವಾದಗಳು. ನಿಮ್ಮ ಕಾರ್ಯ ರಾಯರ ಹೃದಯಕ್ಕೆ ಅರ್ಪಣೆ..Love you all” ಎಂದು ಬರೆದುಕೊಂಡಿದ್ದಾರೆ.

ಅಂಧ ಸಹೋದರಿಯರು:
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಸಹೋದರಿಯ ನೋವಿನ ಕಥೆ ಕೇಳಿದ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದರು.

ಅಲ್ಲದೇ ಸಹೋದರಿಯರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ಧಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದರು.

https://www.instagram.com/p/B88YTrMpH2C/

ಸಹೋದರಿಯರಿಗೆ ಹುಟ್ಟಿನಿಂದ ಕಣ್ಣಿಲ್ಲ. ಇವರು ಒಟ್ಟು ನಾಲ್ಕು ಜನ ಮಕ್ಕಳು, ಅವರಲ್ಲಿ ಇಬ್ಬರಿಗೆ ಕಣ್ಣಿಲ್ಲ. ಗಂಡು ಮಗ ಇದ್ದನು. ಆತನೂ ಕೂಡ ಕಾಯಿಲೆಯಿಂದ ಮೃತಪಟ್ಟಿದ್ದಾನೆ. ತಾಯಿಯೂ ಕೂಡ ಸಾವನ್ನಪ್ಪಿದ್ದು, ಅಜ್ಜಿ ಜೊತೆ ವಾಸವಾಗಿದ್ದಾರೆ. ತಂದೆಯೂ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಷ್ಟದಲ್ಲೂ ಅಂಧ ಸಹೋದರಿಯರು ಸಂಸಾರದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಊಟಕ್ಕಾಗಿ ರತ್ಮಮ್ಮ ಮತ್ತು ಮಂಜಮ್ಮ ಊರಿನ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡು ಹೇಳಲು ಶುರು ಮಾಡಿದ್ದರು. ಅಲ್ಲಿಗೆ ಬರುವ ಭಕ್ತರು ನೀಡುವ ಹಣದಿಂದ ಸಂಸಾರವನ್ನು ನಡೆಸುತ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *