ರಾಜ್ಯ ಸರ್ಕಾರದ ವಿರುದ್ಧ ನಟ ಇಂದ್ರಜಿತ್ ಲಂಕೇಶ್ ವಾಗ್ದಾಳಿ!

Public TV
1 Min Read

ದಾವಣಗೆರೆ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಈಗಾಗಲೇ 4 ತಿಂಗಳು ಕಳೆದಿದೆ. ರಾಜ್ಯ ಸರ್ಕಾರ ಕೊಲೆಗಡುಕರನ್ನು ಹಿಡಿಯೋದ್ರಲ್ಲಿ ವಿಫಲವಾಗಿದೆ ಅಂತ ನಟ ಇಂದ್ರಜಿತ್ ಲಂಕೇಶ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿಯಲ್ಲಿ ಮಾತನಾಡಿದ ಅವರು, ನನ್ನ ಅಕ್ಕನ ಕೊಲೆ ಪ್ರಕರಣದಲ್ಲಿ ರಾಜಕೀಯ ಮಾಡಬೇಡಿ, ನನಗೆ ನ್ಯಾಯ ಕೊಡಿಸಿ ಅಂತ ಸರ್ಕಾರಕ್ಕೆ ಅಂಗಲಾಚಿದ್ದಾರೆ.

ನನ್ನ ಅಕ್ಕನ ಕೊಲೆಯಾಗಿ 4 ತಿಂಗಳ ಆಯ್ತು. ಇನ್ನು ತನಿಖೆ ಪ್ರಗತಿಯಲ್ಲಿಲ್ಲ. ಕೇವಲ ನನ್ನ ಅಕ್ಕ ಅಲ್ಲ, ದಾನಮ್ಮ, ದೀಪಕ್, ಬಶೀರ್ ಹೀಗೆ ಅನೇಕರ ಕೊಲೆಯಾಗಿದೆ. ರಾಜ್ಯ ಸರ್ಕಾರ ಕೊಲೆಗಡುಕರನ್ನ ಸೆರೆ ಹಿಡಿಯೋದ್ರಲ್ಲಿ ವಿಫಲವಾಗಿದೆ. ನನಗೆ ನ್ಯಾಯಕೊಡಿಸಿ ಅಂತ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

2017ರ ನವೆಂಬರ್ 5ರಂದು ಸಂಜೆ ಗೌರಿ ಲಂಕೇಶ್ ತಮ್ಮ ಕಚೇರಿಯಿಂದ ರಾಜರಾಜೇಶ್ವರಿ ನಗರದಲ್ಲಿರೋ ತಮ್ಮ ಮನೆಗೆ ಕಾರಿನಲ್ಲಿ ವಾಪಸ್ಸಾಗಿ, ಮನೆಯ ಗೇಟ್ ತೆರೆಯುತ್ತಿದ್ದಂತೆಯೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದರಿಂದ ಗುಂಡು ಗೌರಿ ಲಂಕೇಶ್ ಅವರ ಎದೆ ಮತ್ತು ಹೃದಯ ಭಾಗಕ್ಕೆ ತಗುಲಿದ್ದು, ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದರು. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು ಅಲ್ಲದೇ, ಗೌರಿ ಪರ ಅನೇಕ ಪ್ರತಿಭಟನೆಗಳು ನಡೆದವು.

ಇನ್ನು ಘಟನೆಯ ಬಳಿಕ ಗೌರಿ ಮನೆ ಮತ್ತು ಸ್ಥಳೀಯ ಅಂಗಡಿಗಳ ಸಿಸಿಟಿವಿ ದೃಶ್ಯವನ್ನಾಧರಿಸಿ ಪೊಲೀಸರು ಮೂವರು ಶಂಕಿತರ ರಾಖಾಚಿತ್ರ ಬಿಡುಗಡೆ ಮಾಡಿದ್ದರು. ಇದರಲ್ಲಿ ಓರ್ವನ ಹಣೆಯಲ್ಲಿ ಕುಂಕುಮವಿತ್ತು. ಈ ಫೋಟೋ ಭಾರೀ ವಿವಾದ ಸೃಷ್ಟಿಸಿತ್ತು. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.

ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಗೌರಿ ಹತ್ಯೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಮಾತ್ರ ಪದೇ ಪದೇ ಪುನರಾವರ್ತನೆ ಆಗುತ್ತಿದ್ದರೂ ಹಂತಕರ ಬಂಧನ ಆಗದೇ ಇದ್ದಿದ್ದಕ್ಕೆ ಸಾಮಾಜಿಕ ಜಾಲಾತಾಣಗಳಲ್ಲಿ ಜನ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *