ಬೇಗ ಕೋರ್ಟ್ ನಿಂದ ಜಾಮೀನು ಸಿಗಲೆಂದು ವಿಜಯ್ ಅಭಿಮಾನಿಗಳಿಂದ ಪೂಜೆ

Public TV
2 Min Read

ದಾವಣಗೆರೆ: ನಟ ದುನಿಯಾ ವಿಜಯ್ ಜೈಲು ಸೇರಿದ ಹಿನ್ನೆಲೆಯಲ್ಲಿ ಅವರಿಗೆ ಬೇಗ ನ್ಯಾಯಾಲಯದಿಂದ ಜಾಮೀನು ಸಿಗಬೇಕೆಂದು ದಾವಣಗೆರೆಯಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.

ಕನ್ನಡ ಕಂಠೀರವ ದುನಿಯಾ ವಿಜಯ್ ಅಭಿಮಾನಿಗಳ ಸಂಘದ ವತಿಯಿಂದ ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೆಚ್ಚಿನ ನಟ ದುನಿಯಾ ವಿಜಿಯವರಿಗೆ ಜಾಮೀನು ದೊರೆತು ಹೊರಗೆ ಬರಬೇಕು ಎಂದು ಪ್ರಾರ್ಥಿಸಿದ್ರು. ಹತ್ತಾರೂ ಅಭಿಮಾನಿಗಳು ನಟ ದುನಿಯಾ ವಿಜಿಯವರ ಭಾವಚಿತ್ರವನ್ನು ಹಿಡಿದು ಬಹುಬೇಗ ಜಾಮೀನು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಶನಿವಾರ ನಡೆದಿದ್ದೇನು?
ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿತ್ತು. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.

ಬುಧವಾರ ಮಧ್ಯಾಹ್ನ 3 ಗಂಟೆಗೆ ಜಿಮ್ ಟ್ರೇನರ್ ಮಾರುತಿಗೌಡ ಮೇಲೆ ಹಲ್ಲೆ ಪ್ರಕರಣ ಸಂಬಂಧ ಜಾಮೀನು ಅರ್ಜಿ ಆದೇಶ ಪ್ರಕಟವಾಗಲಿದೆ. ಈ ಹಿಂದೆ ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಶಾಸಕ ಹ್ಯಾರೀಸ್ ಪುತ್ರ ನಲಪಾಡ್‍ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು. ಇತ್ತ ಮಾರುತಿಗೌಡ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಜಯ್‍ಗೆ ಜಾಮೀನು ಸಿಗೋದು ಅನುಮಾನವಾಗಿದೆ.

ದುನಿಯಾ ವಿಜಯ್ ರೌಡಿ ಅಲ್ಲ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ವಿಜಿ ಓರ್ವ ಸೆಲೆಬ್ರೆಟಿ ಎಂಬ ಕಾರಣಕ್ಕೆ ಪ್ರಕರಣವನ್ನು ಇಷ್ಟು ದೊಡ್ಡದಾಗಿ ಮಾಡಲಾಗುತ್ತಿದ್ದು, ನನ್ನ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ವಿಜಿ ಪರ ವಕೀಲರು ವಾದ ಮಂಡಿಸಿದ್ದರು. ದುನಿಯಾ ವಿಜಿ ಹಲವು ಬಾರಿ ಜಗಳ ಮಾಡಿಕೊಂಡಿದ್ದಾರೆ. ಇವರ ಮೇಲೆ ಇಂತಹ ಪ್ರಕರಣಗಳು ಪದೇ ಪದೇ ದಾಖಲಾಗುತ್ತಿವೆ. ಒಂದು ವೇಳೆ ಜಾಮೀನು ನೀಡಿದರೆ, ತಮ್ಮ ಪ್ರಭಾವ ಬಳಸಿ ಸಾಕ್ಷಿಗಳ ಮೇಲೆ ಒತ್ತಡ ಹೇರುತ್ತಾರೆ. ಆದ್ದರಿಂದ ಆರೋಪಿ ದುನಿಯಾ ವಿಜಯ್ ಮತ್ತು ಸ್ನೇಹಿತರಿಗೆ ಜಾಮೀನು ನೀಡಕೂಡದು ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *