ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಟ್ಟಾ ಅಭಿಮಾನಿ ಶಿವಮೊಗ್ಗದ ರೇವಂತ್ ನಿಧನರಾಗಿದ್ದಾರೆ.
ಬೋನ್ ಕ್ಯಾನ್ಸರ್ ಗೆ ತುತ್ತಾಗಿದ್ದ ರೇವಂತ್ ಸಾವಿನ ಕೊನೆ ದಿನಗಳನ್ನ ಎಣಿಸುತ್ತಿದ್ದರು. ಈ ವೇಳೆ ದರ್ಶನ್ರನ್ನು ಮಾತನಾಡಿಸಬೇಕು ಎನ್ನುವ ಆಸೆಯನ್ನು ರೇವಂತ್ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ದರ್ಶನ್ ತಮ್ಮ ಅಭಿಮಾನಿ ರೇವಂತ್ ಜೊತೆ ವೀಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದರು.
ರೇವಂತ್ ಅವರಿಗೆ ದರ್ಶನ್ ಅಂದ್ರೆ ಅಚ್ಚುಮೆಚ್ಚು. ನೆಚ್ಚಿನ ನಟನ ಎಲ್ಲಾ ಸಿನಿಮಾ ನೋಡುತ್ತಿದ್ದರು. ಅಲ್ಲದೇ ದರ್ಶನ್ ಅವರ ಹುಟ್ಟುಹಬ್ಬದ ದಿನ ಬೆಂಗಳೂರಿಗೆ ಹೋಗಿ ಶುಭ ಕೋರಿ ಬರುತ್ತಿದ್ದರು. ದರ್ಶನ್ ಅವರನ್ನು ಭೇಟಿಯಾಗಬೇಕು, ಮಾತನಾಡಬೇಕೆಂಬ ಬಯಕೆ ಅವರಿಗೆ ಜಾಸ್ತಿಯಾಗಿತ್ತು. ಆದ್ದರಿಂದ ದರ್ಶನ್ ತಮ್ಮ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ, ನಾನು ಬ್ಯುಸಿಯಾಗಿದ್ದೇನೆ. ಆದಷ್ಟು ಬೇಗ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದ್ದರು. ಆದರೆ ಕೊನೆಗೂ ತನ್ನ ಆಸೆ ಈಡೇರಿದ ಕ್ಷಣವೇ ರೇವಂತ್ ಇಹಲೋಕ ತ್ಯಜಿಸಿದ್ದಾರೆ. ಶಿವಮೊಗ್ಗದ ಸ್ವಗ್ರಹದಲ್ಲಿ ಇಂದು ಸಂಜೆ 4.30 ಕ್ಕೆ ರೇವಂತ್ ಮೃತರಾಗಿದ್ದಾರೆ.