Exclusive: ‘ಕಾಟೇರ’ ಡೈರೆಕ್ಟರ್‌ಗೆ ದರ್ಶನ್ ಸಾಥ್- ‘ವೀರ ಸಿಂಧೂರ ಲಕ್ಷ್ಮಣ’ ಬರೋದು ಕನ್ಫರ್ಮ್

Public TV
1 Min Read

ಸ್ಯಾಂಡಲ್‌ವುಡ್‌ನ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ (Darshan) ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬಹುಕೋಟಿ ವೆಚ್ಚದ ‘ವೀರ ಸಿಂಧೂರ ಲಕ್ಷ್ಮಣ’ ಸಿನಿಮಾ ಬರೋದು ಪಕ್ಕಾ ಆಗಿದೆ. ದರ್ಶನ್ ನಟನೆಯ 59ನೇ ಚಿತ್ರಕ್ಕೆ ‘ಕಾಟೇರ’ (Kaatera) ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ಆ್ಯಕ್ಷನ್ ಕಟ್ ಹೇಳಲಿದ್ದಾರೆ.

‘ಕಾಟೇರ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಮತ್ತೆ ಅದೇ ಟೀಮ್ ಜೊತೆ ದರ್ಶನ್ ಕೆಲಸ ಮಾಡಲು ಮುಂದಾಗಿದ್ದಾರೆ. ರೈತರ ಸಂಕಷ್ಟದ ಕಥೆ ಜೊತೆ ಮಣ್ಣಿನ ಕಥೆ ಹೇಳಿ ಗೆದ್ದ ತರುಣ್ ಸುಧೀರ್ ಮಗದೊಮ್ಮೆ  ‘ವೀರ ಸಿಂಧೂರ ಲಕ್ಷ್ಮಣ’ ಸಿನಿಮಾಗೆ ನಿರ್ದೇಶನ ಮಾಡೋದು ಪಕ್ಕಾ ಆಗಿದೆ. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ಅರ್ಜುನ್ ಸರ್ಜಾ ಪುತ್ರಿ ಮದುವೆ

ಈಗಾಗಲೇ ‘ಯಜಮಾನ’ ಮತ್ತು ‘ಕ್ರಾಂತಿ’ ಸಿನಿಮಾದಂತಹ ಎರಡು ಸೂಪರ್ ಹಿಟ್ ಚಿತ್ರಗಳನ್ನು ದರ್ಶನ್ ಅವರಿಗೆ ನೀಡಿರುವ ಮೀಡಿಯಾ ಹೌಸ್‌ನ ಶೈಲಜಾ ನಾಗ್ ಮತ್ತು ಬಿ.ಸುರೇಶ ಮತ್ತೊಂದು ಕ್ರಾಂತಿಕಾರಿ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸ್ವಾತಂತ್ರ‍್ಯ ಸಂಗ್ರಾಮದ ಕ್ರಾಂತಿ ಕಿಡಿ ‘ವೀರ ಸಿಂಧೂರ ಲಕ್ಷ್ಮಣ’ನಂಥ (Veera Sindhoora Lakshmana) ಐತಿಹಾಸಿಕ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

‘ವೀರ ಸಿಂಧೂರ ಲಕ್ಷ್ಮಣ’ ಅಂದಾಕ್ಷಣ ಥಟ್ಟನೆ ನೆನಪಾಗೋದು ಹಿರಿಯ ನಟ ಸುಧೀರ್. ಸಿಂಧೂರ ಲಕ್ಷ್ಮಣ ನಾಟಕವನ್ನು ಜನಪ್ರಿಯಗೊಳಿಸಿದ ಮಹಾನ್ ಕಲಾವಿದ ಸುಧೀರ್. ತಮ್ಮ ತಂದೆಯ ಅಭಿನಯದ ಅಪರೂಪದ ಪಾತ್ರವನ್ನು ತೆರೆಗೆ ತರಲು ರೆಡಿಯಾಗುತ್ತಿದ್ದಾರೆ ತರುಣ್ ಸುಧೀರ್. ‘ಕ್ರಾಂತಿ’ ಪುರುಷ ಲಕ್ಷ್ಮಣನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಮುಂದೆ ಸಿನಿಮಾ ಬಗ್ಗೆ ಏನೆಲ್ಲಾ ಅಪ್‌ಡೇಟ್ ಸಿಗಲಿದೆ ಕಾದುನೋಡಬೇಕಿದೆ.

Share This Article