ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಈಗಾಗಲೇ ಚಕ್ರವರ್ತಿ, ಸಾರಥಿ, ದಾಸ ಮತ್ತು ಅಗ್ರಜ ಎಂಬ ಅನೇಕ ಬಿರುದುಗಳು ಇವೆ. ಈಗ ಅವರಿಗೆ ಮತ್ತೊಂದು ಬಿರುದು ಸಿಕ್ಕಿದೆ.
ನಾಗರಹಾವು ಸಿನಿಮಾದಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರ ಮಾಡಿ ಖ್ಯಾತಿ ಪಡೆದಿದ್ದ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದರು. ಆದ್ದರಿಂದ ಅವರನ್ನು ಶಂಕರ್ ಅಶ್ವಥ್ ಅವರು `ದೇವರಂಥ ಮನುಷ್ಯ’ ಎಂದು ಕರೆದು ಬಿರುದು ಕೊಟ್ಟಿದ್ದಾರೆ.
ದರ್ಶನ್ ಎಂಟು ವರ್ಷಗಳ ನಂತರ ಮಾಡಿದ್ದ ಸಹಾಯವನ್ನ ಮೆಲುಕು ಹಾಕಿದ್ದಾರೆ. ಜನವರಿ 18, 2010 ರಂದು ಚಾಮಯ್ಯ ಮೇಷ್ಟ್ರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು. ಇದರಿಂದ ಇಡೀ ಚಿತ್ರರಂಗ ದುಃಖದ ಮಡಿಲಲ್ಲಿತ್ತು. ಎಲ್ಲರೂ ಕೂಡ ಕಣ್ಣೀರು ಹಾಕುತ್ತಾ ಮೇಷ್ಟ್ರ ಅಂತಿಮ ದರ್ಶನ ಮಾಡಿದ್ದರು. ಆದರೆ ದರ್ಶನ್ ಅಶ್ವಥ್ ಕುಟುಂಬಸ್ಥರ ನೆರವಿಗೆ ಧಾವಿಸಿದ್ದು ವಿಶೇಷವಾಗಿತ್ತು.
ತೂಗುದೀಪ್ ಅವರ ಆರೋಗ್ಯ ಕೆಟ್ಟಾಗ ನಮ್ಮ ಅಪ್ಪ ಅನೇಕ ಬಾರಿ ಶ್ರೀನಿವಾಸ್ ಅವರನ್ನ ನೋಡಲು ಹೋಗುತ್ತಿದ್ದರು. ಅದೇ ನನ್ನ ತಂದೆ ತೀರಿಕೊಂಡಾಗ ದರ್ಶನ್ ಅವರು ಬೆಂಗಳೂರಿನಿಂದ ಬಂದು ಅಂತಿಮ ದರ್ಶನವನ್ನ ಮಾಡಿದ್ದರು. ಹಿರಿಯರು ಮನೆಯಲ್ಲಿ ತೀರಿಕೊಂಡಾಗ ತಕ್ಷಣವೇ ಕೈಕಾಲುಗಳು ಓಡುವುದಿಲ್ಲ. ಅದಕ್ಕೆ ಅನೇಕ ಕಾರಣಗಳು ಸಮಸ್ಯೆಗಳು ಇರುತ್ತವೆ. ಅದರಲ್ಲಿ ಎಷ್ಟೋ ಬಡವರ ಮನೆಯಲ್ಲಿ ಹಣದ ಮುಗ್ಗಟ್ಟು ಬಹಳವಾಗಿ ಇರುತ್ತದೆ. ಅದರ ಬಗ್ಗೆ ಹೆಚ್ಚು ಗಮನ ಯಾರೂ ಕೊಡುವುದಿಲ್ಲ. ಆದರೆ ಯಾರಿಗೂ ಗೊತ್ತಾಗಾದ ಹಾಗೇ ಕಿಸೆಯಿಂದ ಹಣವನ್ನು ತೆಗೆದು ಕೊಟ್ಟು ಸದ್ದಿಲ್ಲದೇ ನಿರ್ಗಮಿಸಿದ ವ್ಯಕ್ತಿ ದರ್ಶನ್ ಅವರು ಎಂದು ಶಂಕರ್ ಅಶ್ವಥ್ ಬರೆದು ಕೊಂಡಿದ್ದಾರೆ.
ಇದು ತೆರೆಯ ಮೇಲೆ ಬಂದ ಪಾತ್ರವಲ್ಲ, ನೈಜತೆಯ ಒಂದು ನಡುವಳಿಕೆ. ಇಂತಹದ್ದನ್ನು ಯಾರೇ ಮಾಡಿದರು ಅಂತಹ ವ್ಯಕ್ತಿಯನ್ನು ದೊಡ್ಡ ವ್ಯಕ್ತಿ ಎನ್ನುತ್ತೇವೆ ನಾವು ಇನ್ನೊಬ್ಬರ ನೋವನ್ನು ಅರಿಯುವ ಸಂಸ್ಕಾರ ಉಳ್ಳ ಸಹೃದಯಿಯನ್ನು `ದೇವರಂಥ ಮನುಷ್ಯ’ ಎಂದು ಕರೆಯಬಹುದಲ್ಲವೆ ಎಂದು ಶಂಕರ್ ಅಶ್ವಥ್ ಅವರ ಅಭಿಪ್ರಾಯ ಪಟ್ಟಿದ್ದಾರೆ.