ಕೋರ್ಟ್ ಆವರಣದಲ್ಲಿ ಇನ್ಸ್‌ಪೆಕ್ಟರ್‌ಗೆ ಆವಾಜ್ ಹಾಕಿದ ಕೈದಿ

Public TV
1 Min Read

ಧಾರವಾಡ (ಹುಬ್ಬಳ್ಳಿ): ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಕೋರ್ಟ್ ಆವರಣದಲ್ಲಿಯೇ ಅಶ್ಲೀಲ ಪದ ಬಳಸಿ ಇನ್ಸ್‌ಪೆಕ್ಟರ್‌ಗೆ ಅವಾಜ್ ಹಾಕಿರುವ ಘಟನೆ ನಗರದಲ್ಲಿ ನಿನ್ನೆ ನಡೆದಿದೆ. ಉಡುಪಿ ಮೂಲದ ನಾಗರಾಜ್ ಬಳಿಗಾರ್ ಅವಾಚ್ಯ ಪದಗಳಿಂದ ನಿಂದಿಸಿದ ಕೈದಿ. ಅಶೋಕ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಗದೀಶ್ ಹಂಚನಾಳ ಅವರಿಗೆ ನಾಗರಾಜ್ ಆವಾಜ್ ಹಾಕಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ.

ಘಟನೆಯ ವಿವರ: ಸರಣಿ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಾಗರಾಜ್ ನನ್ನು ಅಶೋಕ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಹಂಚನಾಳ ನೇತೃತ್ವದ ತಂಡ ಬಂಧಿಸಿತ್ತು. ಬಳಿಕ ಆತನನ್ನು ಹುಬ್ಬಳ್ಳಿಯ 5ನೇ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 8 ವರ್ಷ ಜೈಲು ಶಿಕ್ಷಿ ವಿಧಿಸಿ ತೀರ್ಪು ನೀಡಿತ್ತು. ಕೋರ್ಟ್ ನಿಂದ ಹೊರ ಬಂದು ಪೊಲೀಸ್ ವಾಹನದಲ್ಲಿ ಕುಳಿತಿದ್ದ ನಾಗರಾಜ್, ಜೈಲಿನಿಂದ ಹೊರಗಡೆ ಬಂದ ಮೇಲೆ ನಿನ್ನ ನೋಡಿಕೊಳ್ಳುತ್ತೇನೆ. ಧಮ್ ಇದ್ರೆ ಒಬ್ಬನೇ ಬಾ ನೋಡೋಣ ಅಂತ ಇನ್ಸ್‌ಪೆಕ್ಟರ್‌ ಜಗದೀಶ್ ಹಂಚನಾಳ ಅವರಿಗೆ ಆವಾಜ್ ಹಾಕಿದ್ದಾನೆ.

ಅವಾಚ್ಯ ಪದಗಳಿಂದ ನಿಂದಿಸಿ, ಬೈಯುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಆವಾಜ್ ಹಾಕಿರುವುದು ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಕೈದಿ ನಾಗರಾಜ್ ವಿರುದ್ಧ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *