ಕೋಲಾರ: ಮಗನೊಂದಿಗೆ ಬರುತ್ತಿದ್ದ ಮಹಿಳೆಯನ್ನು ವ್ಯಕ್ತಿಯೋರ್ವ ಎಳೆದೊಯ್ದು ಅಮಾನುಷವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ನೀಲಗಿರಿ ತೋಪಿನಲ್ಲಿ ನಡೆದಿದೆ.
ಜಿಲ್ಲೆಯ ಮಾಲೂರು ತಾಲೂಕು ರಾಂಪುರ ಸೊಣ್ಣಪಹಳ್ಳಿ ಬಳಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಬೆಂಗಳೂರಿನ ಸರ್ಜಾಪುರ ಮೂಲದ ಮಂಜುಳಾ (38) ಕೊಲೆಯಾದ ದುರ್ದೈವಿ. ರಾಂಪುರದ ಮೂಲದ ಅಂಬರೀಶ್ ಎಂಬಾತನೇ ಕೊಲೆಗೈದ ಆರೋಪಿಯಾಗಿದ್ದಾನೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ತನ್ನ 14 ವರ್ಷದ ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ರಾಂಪುರಕ್ಕೆ ಮಂಜುಳಾ ಬಂದಿದ್ದಾರೆ. ಈ ವೇಳೆ ರಾಂಪುರ ಹಾಗೂ ಸೊಣ್ಣಪ್ಪನಹಳ್ಳಿ ಮಾರ್ಗ ಮಧ್ಯೆ ಮಹಿಳೆಯನ್ನು ಅಡ್ಡಗಟ್ಟಿದ ಅಂಬರೀಶ್ ನೀಲಗಿರಿ ತೋಪಿಗೆ ಎಳೆದೊಯ್ದು ಕೊಲೆ ಮಾಡಿದ್ದಾನೆ ಎಂದು ಜೊತೆಯಲ್ಲಿದ್ದ ಮಗ ಪೊಲೀಸರಿಗೆ ತಿಳಿಸಿದ್ದಾನೆ.
ಕಳೆದ 11 ವರ್ಷಗಳ ಹಿಂದೆಯೆ ತನ್ನ ಗಂಡನನ್ನ ಕಳೆದುಕೊಂಡಿರುವ ಮಂಜುಳಾ ಸರ್ಜಾಪುರದ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಂದು ಮಹಿಳೆ ಅಂಬರೀಶ್ನನ್ನೇ ಭೇಟಿ ಮಾಡಲು ಬಂದಿದ್ದರು ಎನ್ನಲಾಗಿದೆ. ಅಲ್ಲದೆ ಸ್ವತಃ ಅಂಬರೀಶ್ ತಾನೇ ಕೊಲೆ ಮಾಡಿರುವುದು ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಕೊಲೆ ಮಾಡಿರುವುದಕ್ಕೆ ನಿಖರ ಕಾರಣವನ್ನು ಆರೋಪಿ ಬಾಯಿಬಿಟ್ಟಿಲ್ಲ.
ಸದ್ಯ ಘಟನಾ ಸ್ಥಳಕ್ಕೆ ಎಸ್ಪಿ ರೋಹಿಣಿ ಕಟೋಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.