ಮಲಯಾಳಂನ (Malayalam) ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಶೂಟಿಂಗ್ ವೇಳೆ ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು. ವಿಲಾಯತ್ ಬುದ್ದ ಸಿನಿಮಾದ ಚಿತ್ರೀಕರಣದ ವೇಳೆ ಚಲಿಸುತ್ತಿದ್ದ ಬಸ್ ನಿಂದ ಬಿದ್ದು ತೀವ್ರ ಗಾಯ ಮಾಡಿಕೊಂಡಿದ್ದರು. ಈ ಅವಘಡ (Avaghada) ನಡೆದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಪೃಥ್ವಿ ರಾಜ್ ಸುಕುಮಾರನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದ್ದಂತೆಯೇ ಅವರ ಅಭಿಮಾನಿಗಳು ಆತಂಕಗೊಂಡಿದ್ದರು. ಅವರ ಆರೋಗ್ಯ ಸ್ಥಿತಿ ವಿಚಾರಿಸಲು ಆಸ್ಪತ್ರೆಗೂ ಧಾವಿಸಿದ್ದರು. ಇದೀಗ ಪೃಥ್ವಿರಾಜ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಎರಡು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ.
ಆತಂಕಗೊಂಡ ಅಭಿಮಾನಿಗಳಿಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ. ‘ನೋವಿನ ವಿರುದ್ಧ ಹೋರಾಡಿ, ಗೆದ್ದು ಮತ್ತೆ ನಾನು ಬರುತ್ತೇನೆ. ನಿಮ್ಮ ಹಾರೈಕೆಗೆ ಧನ್ಯವಾದಗಳು. ಸದ್ಯ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆರೋಗ್ಯವಾಗಿದ್ದೇನೆ. ಆತಂಕ ಪಡುವ ಅಗತ್ಯವಿಲ್ಲ. ಹಲವು ತಿಂಗಳ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗುವೆ’ ಎಂದಿದ್ದಾರೆ ಪೃಥ್ವಿರಾಜ್. ಇದನ್ನೂ ಓದಿ:ವರಾಹಿ ಯಾತ್ರೆಯಲ್ಲಿ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರು
ಬಹು ನಿರೀಕ್ಷಿತ ಮಲಯಾಳಂನ ವಿಲಾಯತ್ ಬುದ್ದ (Vilayat Buddha) ಸಿನಿಮಾದ ಸಾಹಸ ಪ್ರಧಾನ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿದ್ದರು ನಿರ್ದೇಶಕರು ಈ ವೇಳೆ ಬಸ್ ನಿಂದ ಪೃಥ್ವಿರಾಜ್ ಜಾರಿ ಬಿದ್ದಿದ್ದಾರೆ. ಆಗ ಅವರ ಕಾಲಿಗೆ ಬಲವಾಗಿಯೇ ಏಟಾಗಿದೆ. ಶಸ್ತ್ರ ಚಿಕಿತ್ಸೆಯ (Surgery) ನಂತರ ಕೆಲ ವಾರಗಳ ಕಾಲ ಅವರು ವಿಶ್ರಾಂತಿ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ಚಿತ್ರೀಕರಣಕ್ಕೆ ಬ್ರೇಕ್ ಬೀಳಲಿದೆ.
ಪೃಥ್ವಿರಾಜ್ ಸುಕುಮಾರನ್ ಗೂ ಕನ್ನಡ ಚಿತ್ರೋದ್ಯಮಕ್ಕೂ ಸಾಕಷ್ಟು ನಂಟಿದೆ. ಹೊಂಬಾಳೆ ಬ್ಯಾನರ್ಸ್ ನಲ್ಲಿ ಇವರೊಂದು ಸಿನಿಮಾವೊಂದನ್ನು ನಿರ್ದೇಶನ ಹಾಗೂ ನಟನೆ ಮಾಡಬೇಕಿದೆ. ಸಲಾರ್ ಸಿನಿಮಾದಲ್ಲೂ ಇವರು ಮಹತ್ವದ ಪಾತ್ರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.