ಶೂಟಿಂಗ್ ವೇಳೆ ಅವಘಡ: ಮಂಡ್ಯ ರಮೇಶ್ ಗೆ ತೀವ್ರ ಗಾಯ

Public TV
1 Min Read

ಸಿನಿಮಾ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸೆ ಧಾರಾವಾಹಿ ಶೂಟಿಂಗ್ ವೇಳೆ ಅವಘಡ ನಡೆದಿದ್ದು, ಅವರಿಗೆ ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದಾರಂತೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಎರಡು ಆಪರೇಷನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಸೀರಿಯಲ್ ನಲ್ಲಿ ಮಂಡ್ಯ ರಮೇಶ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿಯ ದೃಶ್ಯದ ಚಿತ್ರೀಕರಣದಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ.

ರಮೇಶ್ ಅರವಿಂದ್ ನಿರ್ಮಾಣದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದ ಧಾರಾವಾಹಿ ಇದಾಗಿದೆ. ಸದ್ಯ ಚಿಕಿತ್ಸೆ ಪಡೆದಿರುವ ಮಂಡ್ಯ ರಮೇಶ್ ಅವರಿಗೆ ಒಂದು ತಿಂಗಳ ಕಾಲ ರೆಸ್ಟ್ ತಗೆದುಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ. ಕಿರುತೆರೆ, ರಂಗಭೂಮಿ ಮತ್ತು ಸಿನಿಮಾದಲ್ಲಿ ಸಕ್ರೀಯರಾಗಿರುವ ಮಂಡ್ಯ ರಮೇಶ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Share This Article