ಟಂಟಂ, ಲಾರಿ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ, 10 ಕುರಿಗಳ ಸಾವು

Public TV
1 Min Read

ರಾಯಚೂರು: ಟಂಟಂ ವಾಹನ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಬಳಿ ನಡೆದಿದೆ.

ಬೆಳಗಿನ ಜಾವ 6 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಕೊಪ್ಪಳದ ಕುಷ್ಟಗಿ ತಾಲೂಕಿನ ಕನ್ನಾಳ ಗ್ರಾಮದ 40 ವರ್ಷದ ಮೌಲಪ್ಪ, 44 ವರ್ಷದ ಯಮನೂರು ಹಾಗೂ ಸಂಗನಾಳ ಗ್ರಾಮದ ಗಣಪತಿ ಬಾಲಪ್ಪ ಮೃತ ದುರ್ದೈವಿಗಳು.

ಕನ್ನಾಳದಿಂದ ಸಿಂಧನೂರಿಗೆ ಕುರಿ ಸಂತೆಗೆ ಬರುತ್ತಿದ್ದ ಟಂಟಂ ಹಾಗೂ ತೌಡು ತುಂಬಿಕೊಂಡು ಕೊಪ್ಪಳದ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಟಂಟಂನಲ್ಲಿದ್ದ 10 ಕುರಿಗಳು ಸಹ ಸ್ಥಳದಲ್ಲೇ ಸಾವನ್ನಪ್ಪಿವೆ. ಅಲ್ಲದೇ ವಾಹನದಲ್ಲಿದ್ದ ನಾಲ್ಕು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ತಾವರಗೇರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ತುರುವಿಹಾಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *