ಬಾಗಲಕೋಟೆ: ಎಸ್ಆರ್ಎಸ್ ಬಸ್ ಹಾಗೂ ಕ್ರೂಸರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ಕು ಜನ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಕ್ರಾಸ್ ಬಳಿ ನಡೆದಿದೆ.
ಭಾರತಿ ಗಿಡ್ನಂದಿ(40), ಮಂಜವ್ವ(32), ಲಕ್ಷ್ಮಿಬಾಯಿ(28) ಹಾಗು ಐದು ವರ್ಷದ ಬಾಲಕ ಸೇರಿ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೆರೂರು ಮೂಲದವರಾದ ಗಿಡ್ನಂದಿ ಕಟುಂಬದ 15 ಸದಸ್ಯರು ಕ್ರೂಸರ್ ವಾಹನದ ಮೂಲಕ ಆಥಣಿ ತಾಲೂಕಿನ ಕಳೆಗಾಂವ್ ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ರು. ಬಸ್ ಬನಹಟ್ಟಿಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ಲೋಕಾಪುರ ಪಟ್ಟಣದ ಸಮೀಪ ಪೆಟ್ಲೂರ್ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ 8 ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮುಧೋಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.