ಅಂಬುಲೆನ್ಸ್ ಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿ – ಬಾಣಂತಿ ಸೇರಿ ನಾಲ್ವರು ದುರ್ಮರಣ

Public TV
1 Min Read

– ಪವಾಡಸದೃಶವಾಗಿ 7 ದಿನಗಳ ಮಗು ಪಾರು

ಚಿತ್ರದುರ್ಗ: ಆಂಬುಲೆನ್ಸ್ ಗೆ ರೈಲು ಡಿಕ್ಕಿಹೊಡೆದ ಪರಿಣಾಮ ಬಾಣಂತಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ನಡೆದಿದೆ.

ಸರ್ಕಾರಿ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ನಲ್ಲಿ 7 ದಿನಗಳ ಮಗುವಿನೊಂದಿಗೆ ಬಾಣಂತಿ ಚಂದ್ರಕಲಾ ಬಂಡೆ ತಿಮ್ಮಾಪುರ ಗ್ರಾಮಕ್ಕೆ ತೆರಳುತ್ತಿದ್ರು. ಈ ವೇಳೆ ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ರೈಲು ತಳಕು ಗ್ರಾಮದ ರೈಲ್ವೆಗೇಟ್ ಬಳಿ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ 50 ಮೀಟರ್ ದೂರದ ಹಳ್ಳಕ್ಕೆ ಹೋಗಿ ಬಿದ್ದಿದೆ. ದುರಂತದಲ್ಲಿ ಬಾಣಂತಿ ಚಂದ್ರಕಲಾ ಸಾವನ್ನಪ್ಪಿದ್ದು, 7 ದಿನಗಳ ಮಗು ಪವಾಡಸದೃಶವಾಗಿ ಪಾರಾಗಿದೆ.

ಇನ್ನು ಸಾವಿತ್ರಮ್ಮ, ಗಂಗಮ್ಮ, ಸ್ಥಳದಲ್ಲೇ ಮೃತಪಟ್ಟರೆ, ಲಕ್ಷ್ಮಮ್ಮ ಎಂಬವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಗಾಯಗೊಂಡಿರುವ ಆಂಬುಲೆನ್ಸ್ ಚಾಲಕ ಶಿವರೆಡ್ಡಿ, ಚಂದ್ರಕಲಾ ತಾಯಿ ಕದಿರಮ್ಮ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗ್ತಿದೆ. ಘಟನೆಗೆ ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗಿದೆ. ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ರೈಲು ಬರುತ್ತಿದ್ದುದನ್ನು ಗಮನಿಸಿದ್ರೂ ಬೇಗ ದಾಟುವ ಭರದಲ್ಲಿ ವಾಹನವನ್ನ ಅತಿ ವೇಗವಾಗಿ ಚಲಾಯಿಸಿದ್ದಾನೆ. ಈ ಬಗ್ಗೆ ತಳಕು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *