ನನ್ನನ್ನ ಯಾಕೆ ಬಿಟ್ರಿ ಎಂದ ಅಭಿಷೇಕ್ – ಅಂಬಿ ಪುತ್ರನ ಮನವಿಗೆ ಸ್ಪಂದಿಸಿದ ಮುನಿರತ್ನ

Public TV
2 Min Read

ಬೆಂಗಳೂರು: ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರ 100 ದಿನಗಳನ್ನ ಪೂರೈಸಿದ ಪ್ರಯುಕ್ತ ಶುಕ್ರವಾರ ಜೆಪಿ ಪಾರ್ಕಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ನನ್ನ ಕುಟುಂಬದವರಿಗೆಲ್ಲ ದರ್ಶನ್ ಜೊತೆ ಅಭಿನಯಿಸಲು ಅವಕಾಶ ಕೊಟ್ರಿ, ನನ್ನ ಯಾಕೆ ಬಿಟ್ರಿ ಎಂದು ಅಭಿಷೇಕ್ ಅಂಬರೀಶ್ ಕೇಳಿದ ಪ್ರಶ್ನೆಗೆ ವೇದಿಕೆ ಮೇಲೆಯೇ ನಿರ್ಮಾಪಕ ಮುನಿರತ್ನ ಉತ್ತರಿಸಿದರು.

ಕುರುಕ್ಷೇತ್ರ ಶತದಿನ ಸಂಭ್ರಮದಲ್ಲಿ ಸಿನಿಮಾ ಕಲಾವಿದರು ಹಾಗೂ ರಾಜಕೀಯ ಗಣ್ಯರು ಭಾಗಿ ಆಗಿದ್ದರು. ಸಿಎಂ ಯಡಿಯೂರಪ್ಪ, ಸಚಿವ ಬೈರತಿ ಬಸವರಾಜ್, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ದೇಶಕ ನಾಗಣ್ಣ, ಸಂಗೀತ ನಿರ್ದೇಶಕ ಹರಿಕೃಷ್ಣ, ನಟ ರಮೇಶ್ ಭಟ್, ರವಿಶಂಕರ್, ಶ್ರೀನಿವಾಸ್ ಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿ ಸಮಾರಂಭಕ್ಕೆ ಮತ್ತಷ್ಟು ಮೆರಗು ಹೆಚ್ಚಿಸಿದರು.

ಈ ವೇಳೆ ವೇದಿಕೆ ಮೇಲೆ ಮಾತನಾಡುತ್ತಿದ್ದ ನಟ ಅಭಿಷೇಕ್, ಮುನಿರತ್ನ ಅವರು ಎಲ್ಲರಿಗೂ ಚ್ಯಾನ್ಸ್ ಕೊಟ್ಟದ್ದಾರೆ ನನಗೆ ಇನ್ನು ಚ್ಯಾನ್ಸ್ ಕೊಟಿಲ್ಲ. ನನ್ನ ಅಪ್ಪ, ಅಮ್ಮ ಇಬ್ಬರಿಗೂ ದರ್ಶನ್ ಜೊತೆ ಅಭಿನಯಿಸಲು ಅವಕಾಶ ಕೊಟ್ರಿ. ಆದ್ರೆ ನನ್ನ ಯಾಕೆ ಬಿಟ್ರಿ ಎಂದು ಮುನಿರತ್ನರನ್ನ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುನಿರತ್ನ, ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್‍ನ ಮೇಜರ್ ಅಭಿನಂದನ್ ಮಾಡುತ್ತೇನೆ. ಆ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್‍ಗೂ ಅವಕಾಶ ಕೊಡುತ್ತೇನೆ ಎಂದು ಸಿನಿಮಾ ಬಗ್ಗೆ ಅನೌನ್ಸ್ ಮಾಡಿದರು.

ಅಭಿಷೇಕ್ ಕುರುಕ್ಷೇತ್ರ ಸಿನಿಮಾ ಬಗ್ಗೆ ಮಾತನಾಡುತ್ತಾ, ಕುರುಕ್ಷೇತ್ರ ಸಿನಿಮಾವನ್ನ ನಾಡಿನ ಜನತೆಗೆ ಕೊಟ್ಟ ಮುನಿರತ್ನ ಅವರಿಗೆ ಧನ್ಯವಾದ. ಇದು ನಮ್ಮ ತಂದೆ ಅಂಬರೀಶ್ ನಟಿಸಿದ ಕೊನೆಯ ಚಿತ್ರ. ನಮ್ಮ ತಂದೆ ಕುರುಕ್ಷೇತ್ರ ಸಿನಿಮಾವನ್ನ ಡಬ್ಬಿಂಗ್ ಹಂತದಲ್ಲಿ ನೋಡಿದ್ದಾರೆ ಅನ್ನೋದೆ ಸಮಾದಾನ ಪಟ್ಟುಕೊಳ್ಳುವ ವಿಷಯ. ಪ್ರತಿ ಬಾರಿ ಡಬ್ಬಿಂಗ್ ಮಾಡಿ ಮನೆಗೆ ಬಂದಾಗಲೆಲ್ಲಾ ದರ್ಶನ್ ಸ್ಕ್ರೀನ್ ಮೇಲೆ ಹೇಗೆ ಕಾಣ್ತಾನೆ ಗೊತ್ತಾ ಎಂದು ತುಂಬಾ ಸಂತೋಷದಿಂದ ಹೇಳಿಕೊಳ್ಳುತ್ತಿದ್ದರು. ಅಪ್ಪ ನನ್ನನ್ನು ಯಾವಾಗ್ಲೂ ಬೈತಿದ್ರು ಈಗ ತಪ್ಪು ಮಾಡಿದ್ರೆ ದರ್ಶನ್ ಬೈತಾರೆ ಎಂದು ಅಂಬರೀಶ್ ಅವರನ್ನು ಅಭಿಷೇಕ್ ನೆನೆದರು.

ಹಾಗೆಯೇ ಮುನಿರತ್ನ ಅವರು ಎಲ್ಲರಿಗೂ ಚ್ಯಾನ್ಸ್ ಕೊಟ್ಟದ್ದಾರೆ ನನಗೆ ಇನ್ನು ಚ್ಯಾನ್ಸ್ ಕೊಟಿಲ್ಲ. ಮುಂದಿನ ಚಿತ್ರದಲ್ಲಿ ಅವಕಾಶ ಕೊಟ್ಟರೆ ನಾನು ವಿಲನ್ ಆಗಿ ನಟಿಸಲು ಬಯಸುತ್ತೇನೆ. ದರ್ಶನ್ ಅಣ್ಣ ಹೀರೋ ಆಗಿ ನಟಿಸಬೇಕೆಂದು ಆಸೆ ಪಡುತ್ತೇನೆ ಎಂದು ತಮ್ಮ ಆಸೆಯನ್ನು ಹೇಳಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *