ಆಮ್ ಆದ್ಮಿ ಪಕ್ಷದಿಂದ ಯುವ ನಿರ್ದೇಶಕ, ನಟನಿಗೆ ಟಿಕೆಟ್ ಘೋಷಣೆ

Public TV
1 Min Read

ರ್ನಾಟಕ ವಿಧಾನಸಭಾ ಚುನಾವಣೆ (Election) ಎದುರಿಸಲು ಆಮ್ ಆದ್ಮಿ ಪಕ್ಷ (Aam Aadmi Party) ಹಲವು ತಿಂಗಳಿನಿಂದ ಸಿದ್ಧತೆ ನಡೆಸಿತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡುವುದಕ್ಕಾಗಿಯೇ ಹಲವು ರೀತಿಯಲ್ಲಿ ಕಸರತ್ತು ಕೂಡ ನಡೆಸಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗಿಂತ ಮುಂದೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಇಬ್ಬರು ಸಿನಿಮಾ ರಂಗದವರು ಇದ್ದಾರೆ ಎನ್ನುವುದು ವಿಶೇಷ.

ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಚುನಾವಣಾ ತಯಾರಿ ಆರಂಭಿಸಿದ್ದರು. ಕೆಲವರಿಗೆ ಆಗಲೇ ಟಿಕೆಟ್ ಕನ್ಫರ್ಮ್ ಕೂಡ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ 80 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ರಿಲೀಸ್ ಮಾಡಿದೆ.

ಪಕ್ಷ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಏಳು ಜನ ರೈತ ಹೋರಾಟಗಾರರು. ಏಳು ಜನ ಮಹಿಳೆಯರು, 5 ಮಂದಿ ಸಮಾಜಸೇವಕರು, ಮೂರು ಜನ ಡಾಕ್ಟರೇಟ್, 15 ಜನ ಮಾಸ್ಟರ್ಸ್ ಮುಗಿಸಿರುವವರು , 3 ಜನ ಎಂಬಿಬಿಎಸ್ ಮುಗಿಸಿರುವವರು, 13 ಜನ ಲಾಯರ್ಸ್,  ಪತ್ರಕರ್ತರು ಇದ್ದಾರೆ ಹಾಗೂ ಕಲಾವಿದರು ಇದ್ದಾರೆ.

ಹಲವು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ನೂರಾರು ಚಿತ್ರಗಳನ್ನು ಮಾಡಿರುವ ಟೆನ್ನಿಸ್ ಕೃಷ್ಣಗೆ (Tennis Krishna) ಆಮ್ ಆದ್ಮಿ ಪಾರ್ಟಿ ಟಿಕೆಟ್ ಘೋಷಣೆ ಮಾಡಿದ್ದು, ಇವರು ತುರುವೇಕರೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಹಾಸ್ಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ಟೆನ್ನಿಸ್ ಕೃಷ್ಣ, ಕನ್ನಡದ ಅನೇಕ ಹೆಸರಾಂತ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಹಲವಾರು ಚಿತ್ರಗಳನ್ನು ಮಾಡಿರುವ ಸ್ಮೈಲ್ ಶ್ರೀನು (Smile Srinu)  (ಶ್ರೀನಿವಾಸ್ ಎನ್) (Srinivas N) ಅವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಈಗಾಗಲೇ ಹಲವು ತಿಂಗಳಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಚಾರವನ್ನೂ ಆರಂಭಿಸಿದ್ದರು. ಹಲವಾರು ಜನಪರ ಹಾಗೂ ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ನಟ ಶಶಿಕುಮಾರ್ ಪುತ್ರನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಕೀರ್ತಿ ಶ್ರೀನಿವಾಸ್ ಇವರದ್ದು.

Share This Article
Leave a Comment

Leave a Reply

Your email address will not be published. Required fields are marked *