ದೇಶದ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಮೊಬೈಲ್ ಎಟಿಸಿ: ಹೇಗೆ ಕಾರ್ಯನಿರ್ವಹಿಸುತ್ತೆ? ವಿಡಿಯೋ ನೋಡಿ

Public TV
2 Min Read

ನವದೆಹಲಿ: ಭಾರತದ ಪ್ರಮುಖ ಸಣ್ಣ ವಿಮಾನ ಕೇಂದ್ರಗಳಲ್ಲಿ ವಿಮಾನ ಸೇವೆ ಒದಗಿಸಲು 8 ಮೊಬೈಲ್ ವಿಮಾನ ನಿಯಂತ್ರಣ ಕೇಂದ್ರ(ಏರ್ ಟ್ರಾಫಿಕ್ ಕಂಟ್ರೋಲ್)ಗಳನ್ನು ಸ್ಥಾಪಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ಧರಿಸಿದೆ.

ಮೊದಲ ಬಾರಿಗೆ ಜಾರ್ಖಂಡ್‍ನ ಸ್ಟೀಲ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೋಕಾರೊ ಮೊಬೈಲ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಕೇಂದ್ರವನ್ನು ಈ ಸೇವೆಯನ್ನು ಪಡೆಯಲಿದೆ. ಸಣ್ಣ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ನಿಯಂತ್ರಣ ಮಾಡಲು ಎಟಿಸಿ ಬಳಕೆ ಮಾಡಲಿದ್ದು, 64.6 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆ (ಆರ್ ಸಿಎಸ್) ಅಡಿ ಸ್ಲೊವಾಕಿಯಾ ದೇಶದ ಎಂಎಸ್‍ಎಂ ಕಂಪನಿಯಿಂದ 8 ಮೊಬೈಲ್ ಎಟಿಸಿ ಖರೀದಿ ಮಾಡಲು ಮುಂದಾಗಿದೆ.

ಕೇಂದ್ರ ಸರ್ಕಾರದ ವಿಮಾನಯಾನದಲ್ಲಿ ಪಗ್ರತಿ ಸಾಧಿಸುವ ದೃಷ್ಟಿಯಿಂದ ಜಾರಿ ಮಾಡಿದ ಅಗ್ಗದ ಬೆಲೆಯ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯ ಭಾಗವಾಗಿ ಸಣ್ಣ ವಿಮಾನದಲ್ಲಿ ಪ್ರತಿ ದಿನ 1 ಅಥವಾ 2 ವಿಮಾನ ಸೇವೆಗಳನ್ನು ನೀಡಲಾಗುತ್ತಿದೆ. ಈ ವಿಮಾನಗಳ ನಿಯಂತ್ರಣಕ್ಕಾಗಿ ಸದ್ಯ ವಿಮಾನ ಪ್ರಾಧಿಕಾರ ಈ ನಿರ್ಣಯ ಕೈಗೊಂಡಿದೆ. ಉಡಾನ್ ಯೋಜನೆ ಅಡಿ 2,500 ರೂ. ಗಿಂತ ಕಡಿಮೆ ಬೆಲೆಯಲ್ಲಿ ಸೇವೆ ನೀಡಲಾಗುತ್ತಿದೆ.

ಸಣ್ಣ ವಿಮಾನ ನಿಲ್ದಾಣಗಳಲ್ಲಿ ಮೊಬೈಲ್ ಏರ್ ಟ್ರಾಫಿಕ್ ಕಂಟ್ರೋಲ್ ಬಳಸುವುದು ಸೂಕ್ತ ಎಂದು ಎಎಐ ಅಧ್ಯಕ್ಷ ಗುರುಪ್ರಸಾದ್ ಮೊಹಾಪತ್ರಾ ಅಭಿಪ್ರಾಯ ಪಟ್ಟಿದ್ದಾರೆ. ದೇಶದಲ್ಲಿ ಸದ್ಯ 8 ಸಣ್ಣ ವಿಮಾನ ನಿಲ್ದಾಣಗಳು ಈ ಸೇವೆಯನ್ನು ಪಡೆಯಲಿದ್ದು, ಪ್ರಮುಖವಾಗಿ ಬಿಲಾಸ್ಪುರ (ಚತ್ತೀಸ್‍ಗಢ), ಅಂಬಿಕಾಪುರ (ಚತ್ತೀಸ್‍ಗಢ), ಜಗದಾಲ್ಪುರ (ಚತ್ತೀಸ್‍ಗಢ), ಜೆಪೋರ್ ಒಡಿಸ್ಸಾ), ಉತ್ಕೇಳ (ಒಡಿಸ್ಸಾ), ವೆಲ್ಲೂರ್ (ತಮಿಳುನಾಡು), ಬೋಕಾರೊ (ಜಾರ್ಖಂಡ್), ಮಿಥಾಪುರ್ (ಗುಜರಾತ್) ವಿಮಾನ ನಿಲ್ದಾಣಗಳು ಎಟಿಸಿ ಕೇಂದ್ರಗಳನ್ನು ಪಡೆಯಲಿದೆ.

ಸದ್ಯ ತಯಾರಿಸಲಾಗಿರುವ ಎಟಿಸಿ ಕೇಂದ್ರಗಳನ್ನು ಭಾರತದ ಸಣ್ಣ ವಿಮಾನ ನಿಲ್ದಾಣಗಳನ್ನು ಗಮನದಲ್ಲಿಟ್ಟುಕೊಂಡೆ ನಿರ್ಮಾಣ ಮಾಡಲಾಗಿದ್ದು, ತಾಂತ್ರೀಕವಾಗಿ ಈ ಕೇಂದ್ರಗಳು ಆಧುನಿಕ ಸೌಲಭ್ಯಗಳನ್ನು ಹೊಂದಿದೆ

ಏನೆಲ್ಲಾ ಸೌಲಭ್ಯ ಹೊಂದಿದೆ:
ಮೊಬೈಲ್ ಏರ್ ಟ್ರಾಫಿಕ್ ಕಂಟ್ರೋಲ್ ನಲ್ಲಿ ಆಧುನಿಕ ಸಂವಹನ ಸಾಧನ, ದಿಕ್ಸೂಚಿ, ಕಣ್ಗಾವಲು ಕೇಂದ್ರ, ಸ್ವಯಂ ಚಾಲಿತ ಹವಾಮಾನ ವೀಕ್ಷಣಾ ವ್ಯವಸ್ಥೆ ಸಾಧನಗಳನ್ನು ಹೊಂದಿದೆ.

ಈ ಸಾಧನವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡ್ಯೊಯಲು ಸುಲಭವಾಗಿದ್ದು ಕ್ಯಾಬಿನನ್ನು 8 ಮೀಟರ್ ಎತ್ತರವರೆಗೂ ಏರಿಸಬಹುದು. ಈ ಕ್ಯಾಬಿನ್ ಆಲುಮಿನಿಯಮ್ ನಿಂದ ಸಿದ್ಧಪಡಿಸಲಾಗಿದ್ದು, 360 ಡಿಗ್ರಿ ವ್ಯೂ ಸಿಗುತ್ತಿದೆ. ಅಲ್ಲದೇ ಇದು ಸ್ಫೋಟ, ಚಳಿ ಹಾಗೂ ಕಿಟಕಿಗಳು ಮಬ್ಬಾಗುವುದನ್ನು ತಡೆಯುವ ಸಾಮಥ್ರ್ಯ ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ 2017 ಏಪ್ರಿಲ್‍ನಲ್ಲಿ ಉಡಾನ್ ಸೇವೆಗೆ ಹಸಿರು ನಿಶಾನೆ ತೋರಿದ್ದರು. ಶಿಮ್ಲಾದಿಂದ ದೆಹಲಿಗೆ ಮೊದಲ ವಿಮಾನ ಹಾರಾಟವಾಗಿತ್ತು. 2017 ಏಪ್ರಿಲ್ ನಿಂದ 2018 ಸೆಪ್ಟೆಂಬರ್ 23ರ ಅವಧಿಯಲ್ಲಿ ಇದುವರೆಗೂ 4.5 ಲಕ್ಷ ಮಂದಿ ಉಡಾನ್ ಸೇವೆಯನ್ನು ಬಳಕೆ ಮಾಡಿದ್ದಾರೆ. ಈ ಸೇವೆಯನ್ನು ಮತ್ತಷ್ಟು ಜನರಿಗೆ ಲಭ್ಯವಾಗುವಂತೆ ಮಾಡಲು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

https://www.youtube.com/watch?v=S_a7_3BsQSw

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *