ಕೊಪ್ಪಳ: ಜೀವನದಲ್ಲಿ ಜುಗುಪ್ಸೆಗೊಂಡ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಕಾರಟಗಿ ಬಳಿಯ ಹುಳ್ಕಿಹಾಳ ಗ್ರಾಮದಲ್ಲಿ ನಡೆದಿದೆ.
ಹುಳ್ಕಿಹಾಳ ಗ್ರಾಮದ ಶಿವಕುಮಾರ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೂ ಮುನ್ನ ಶಿವಕುಮಾರ್ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾನೆ. ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನಾಗಿದ್ದ ಶಿವಕುಮಾರ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲವು ದಿನಗಳ ಹಿಂದಷ್ಟೇ ಹುಳ್ಕಿಹಾಳ ಗ್ರಾಮಕ್ಕೆ ಮರಳಿದ್ದ. ಮನೆಯಲ್ಲಿ ಇಂದು ಯಾರು ಇಲ್ಲದಿದ್ದಾಗ ಶಿವಕುಮಾರ್ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶಿವಕುಮಾರ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮನೆಯನ್ನು ಪರಿಶೀಲನೆ ಮಾಡಿದಾಗ ಆತನ ಮೊಬೈಲ್ ಪತ್ತೆಯಾಗಿದೆ.
ಸೆಲ್ಫಿ ವಿಡಿಯೋದಲ್ಲಿ ಏನಿದೆ?:
ನನ್ನ ಸಾವಿಗೆ ನಾನೇ ಕಾರಣ. ನೀವು ಬೈದು ಬುದ್ಧಿ ಹೇಳಿದರೂ ನಾನು ಅರ್ಥ ಮಾಡಿಕೊಳ್ಳಲಿಲ್ಲ. ನನಗೆ ವಾಹನ ಕೊಡಿಸಿದ್ದೀರಿ, ಎಲ್ಲ ರೀತಿಯ ಸಹಾಯ ಮಾಡಿದ್ದೀರಿ. ನನ್ನ ಚಟಗಳನ್ನು ಮುಂದುವರಿಸಿದೆ. ಈಗ ಜೀವನ ನಡೆಸಲು ನನ್ನಿಂದ ಆಗುತ್ತಿಲ್ಲ. ನಾನೇ ಶಿಕ್ಷೆಯನ್ನು ಅನುಭವಿಸುತ್ತಿರುವೆ. ನಮ್ಮ ತಂಗಿ ಹಾಗೂ ಅಕ್ಕ ಸಮಸ್ಯೆ ಅಂತ ಮನೆಗೆ ಬಂದರೆ ನಿಷ್ಕಾಳಜಿ ವಹಿಸದೆ ಸಹಾಯ ಮಾಡು ಅಣ್ಣಾ ಎಂದು ಶಿವಕುಮಾರ್, ಬಸಣ್ಣ ಎಂಬವರಿಗೆ ಮನವಿ ಮಾಡಿಕೊಂಡಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv