ಗದಗ | ಆನ್‌ಲೈನ್ ಗೇಮ್‌ಗೆ ಮನನೊಂದು ಯುವಕ ನೇಣಿಗೆ ಶರಣು

Public TV
1 Min Read

ಗದಗ: ಆನ್‌ಲೈನ್ ಗೇಮ್‌ನಿಂದ (Online game) ಹಣ ಕಳೆದುಕೊಂಡು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ (Gadag) ನಗರದ ಹಳೆ ಜಿಲ್ಲಾಧಿಕಾರಿ ಕಚೇರಿಯ ವೃತ್ತದ ಬಳಿಯ ಲಾಡ್ಜ್‌ವೊಂದರಲ್ಲಿ ನಡೆದಿದೆ.

ಮೃತ ಯುವಕನನ್ನು ಶಿರಹಟ್ಟಿ ಮೂಲದ 37 ವರ್ಷದ ಜಗದೀಶ್ ಹಳೆಮನಿ ಎಂದು ಗುರುತಿಸಲಾಗಿದ್ದು, ನೇಣಿಗೆ ಶರಣಾಗಿದ್ದಾನೆ.ಇದನ್ನೂ ಓದಿ: ಬಿಜೆಪಿ ಬಣ ಫೈಟ್‌ – ಶಾಸಕ ಯತ್ನಾಳ್‌ಗೆ ಹೈಕಮಾಂಡ್ ನೋಟಿಸ್‌

ಮೃತ ಜಗದೀಶ್ ದೊಡ್ಡ ವ್ಯಾಪಾರಸ್ಥನಾಗಿದ್ದು, ಹಲವಾರು ತಿಂಗಳಿಂದ ಆನ್‌ಲೈನ್ ಗೇಮ್‌ನಲ್ಲಿ ಮಗ್ನನಾಗಿದ್ದ. ಆನ್‌ಲೈನ್ ಗೇಮ್‌ನಲ್ಲಿ ಆಟವಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ. ನಿನ್ನೆ (ನ.30) ರಾತ್ರಿ 10:30ರ ಸುಮಾರಿಗೆ ಶಿರಹಟ್ಟಿಯಿಂದ ಗದಗನಲ್ಲಿರುವ ಲಾಡ್ಜ್‌ವೊಂದಕ್ಕೆ ಬಂದಿದ್ದ. ಬಳಿಕ ಕಂಠಪೂರ್ತಿ ಕುಡಿದು, ಸ್ವಲ್ಪ ಊಟ ಮಾಡಿದ್ದಾನೆ. ನಂತರ ನಶೆಯಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಡೆತ್‌ನೋಟ್‌ನಲ್ಲಿ ಆನ್‌ಲೈನ್ ಗೇಮ್ ಬ್ಯಾನ್ ಮಾಡಬೇಕೆಂದು ಉಲ್ಲೇಖಿಸಿದ್ದಾನೆ. ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಅವರು ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ನನ್ನಂತೆ ಬಹಳ ಜನರು ಹಾಳಾಗಿದ್ದಾರೆ. ದಯವಿಟ್ಟು ಆನ್‌ಲೈನ್ ಗೇಮ್ ಬ್ಯಾನ್ ಮಾಡುವಂತೆ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಡೆತ್‌ನೋಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾನೆ.

ಇಂದು (ಡಿ.1) ಮಧ್ಯಾಹ್ನವಾದರೂ ರೂಮ್‌ನಿಂದ ಯುವಕ ಹೊರಬರದ ಕಾರಣ ಲಾಡ್ಜ್‌ನವರಿಗೆ ಅನುಮಾನ ವ್ಯಕ್ತವಾಗಿದ್ದು, ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ಕುಟುಂಬಸ್ಥರ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಯತ್ನಾಳ್ ಒಬ್ಬ ಜೋಕರ್, ಮಾನಸಿಕ ರೋಗಿ: ಈಶ್ವರ್ ಖಂಡ್ರೆ

Share This Article