ವರ್ಷ ಕಳೆದರೂ ಕಾರವಾರದ ಹುತಾತ್ಮ ಯೋಧನ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ ಪರಿಹಾರ

Public TV
1 Min Read

– ಛತ್ತಿಸ್‍ಗಢ ಸರ್ಕಾರ ಪರಿಹಾರ ನೀಡಿದರೂ ರಾಜ್ಯ ಸರ್ಕಾರ ನೀಡಿಲ್ಲ

ಕಾರವಾರ: 2018ರಲ್ಲಿ ಛತ್ತಿಸ್‍ಗಢದಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿ ಬಾಂಬ್ ದಾಳಿಯಿಂದಾಗಿ ಸಾವನ್ನಪ್ಪಿದ್ದ ಬಿಎಸ್‍ಎಫ್ ವೀರ ಯೋಧ ಕಾರವಾರದ ಸಾಯಿಕಟ್ಟ ನಿವಾಸಿ ವಿಜಯಾನಂದ ಹುತಾತ್ಮರಾಗಿ ಒಂದು ವರ್ಷಗಳು ಕಳೆದರೂ ರಾಜ್ಯ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ.

ಹುತಾತ್ಮರಾಗಿ ಒಂದು ವರ್ಷ ಕಳೆದಿದ್ದು, ನಿಧನರಾದ ಕುರಿತು ಇಲಾಖೆಯಿಂದ ತನಿಖೆ ನಡೆದು ಸರ್ಕಾರಕ್ಕೆ ವರದಿ ಸಹ ನೀಡಲಾಗಿದೆ. ಛತ್ತಿಸ್‍ಗಢ ಸರ್ಕಾರ ಪರಿಹಾರ ನೀಡಿದೆ. ಆದರೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬರಬೇಕಾದ ಪರಿಹಾರ ಈವರೆಗೂ ಬಂದಿಲ್ಲ. ಅಲ್ಲದೆ ಇವರ ತಾಯಿಗೆ ಬರಬೇಕಿದ್ದ ಪಿಂಚಣಿ ಹಣ ಸಹ ಬಾರದೇ ಕುಟುಂಬ ರೋಧಿಸುವಂತಾಗಿದೆ.

ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಹ ನೀಡಿದ್ದು ಈವರೆಗೂ ಹಣ ಬಿಡುಗಡೆಯಾಗಿಲ್ಲ. ವೀರ ಯೋಧನ ಸಾವಿಗೆ ಪರಿಹಾರದ ಆಶ್ವಾಸನೆ ನೀಡಿ ಗೌರವ ಸಲ್ಲಿಸಿ ಸರ್ಕಾರ ಮೌನವಹಿಸಿರುವುದಕ್ಕೆ ಹುತಾತ್ಮ ಯೋಧನ ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಮಗ ನಕ್ಸಲ್ ವಿರುದ್ಧ ಹೋರಾಡಿ ಹುತಾತ್ಮನಾಗಿ ಒಂದು ವರ್ಷ ಕಳೆದಿದೆ. ಆತನ ಪುತ್ಥಳಿ ಮಾಡುವುದಾಗಿ ಕೂಡ ಸರ್ಕಾರ ಹೇಳಿತ್ತು. ಆದರೆ ಪರಿಹಾರ ನೀಡುವುದಿರಲಿ ಪುತ್ಥಳಿಯನ್ನು ಸಹ ಮಾಡಲಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *