ಮ್ಯಾಟ್ರಿಮೋನಿಯಲ್ಲಿ ಪರಿಚಯ- ಸಂಬಳವಾಗಿಲ್ಲವೆಂದು ಯುವತಿಯಿಂದ ಹಣ ಪಡೆದು ಖಾತೆಯನ್ನೇ ಡಿಲೀಟ್ ಮಾಡ್ದ

Public TV
1 Min Read

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಯುವತಿಗೆ ವಂಚನೆ ಮಾಡಿರುವ ಘಟನೆ ನಾಗರಬಾವಿಯಲ್ಲಿ ನಡೆದಿದೆ.

ನಾಗರಬಾವಿಯ ನಿವಾಸಿಯಾದ ಆರೋಪಿ ಮ್ಯಾಟ್ರಿಮೋನಿ ವೆಬ್‍ಸೈಟ್‍ನಲ್ಲಿ ವಿಜಯ್ ಶ್ರೀವಾಸ್ತವ್ ಹೆಸರಿನಲ್ಲಿ ಖಾತೆ ತೆರೆದಿದ್ದು, ದಕ್ಷಿಣ ಆಫ್ರಿಕಾದಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುವುದಾಗಿ ಹೇಳಿ 26 ವರ್ಷದ ಯುವತಿಗೆ ವಂಚನೆ ಮಾಡಿ 9 ಲಕ್ಷ ಹಣ ಪಡೆದಿದ್ದಾನೆ.

2000 ಇಸವಿಯಲ್ಲಿ ದಿವ್ಯಾ ಎಂಬಾಕೆ ಜೊತೆ ಮದುವೆಯಾಗಿತ್ತು. ನಮಗೆ ಒಬ್ಬ ಗಂಡು ಮಗನಿದ್ದಾನೆ. ಪತ್ನಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದಳು ಹಾಗೂ 2010ರಲ್ಲಿ ಮೃತಪಟ್ಟಿದ್ದಾಳೆ. ಮಗುವಿನ ಭವಿಷ್ಯದ ದೃಷ್ಟಿಯಿಂದ 2ನೇ ಮದುವೆಯಾಗಲು ನಿರ್ಧಾರ ಮಾಡಿದ್ದೇನೆ. ಹೀಗಾಗಿ ವಧುವಿನ ಅನ್ವೇಷಣೆಯಲ್ಲಿದ್ದೇನೆ ಎಂದು ಆರೋಪಿ ಬರೆದುಕೊಂಡಿದ್ದ.

ಮ್ಯಾಟ್ರಿಮೋನಿಯಲ್ಲಿ ಯುವತಿಯೊಬ್ಬರ ಪರಿಚಯವಾಗಿದ್ದು, ಬಳಿಕ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಸಂಭಾಷಣೆ ನಡೆಸಲು ಆರಂಭಿಸಿದ್ದರು. ಎರಡು ತಿಂಗಳ ಮಾತುಕತೆ ನಂತರ ಯುವತಿ ಮದುವೆಯಾಗಲು ಒಪ್ಪಿಕೊಂಡಿದ್ದರು.

ಕಂಪೆನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಆರು ತಿಂಗಳಿನಿಂದ ವೇತನ ನೀಡಿಲ್ಲ. ಹೀಗಾಗಿ ಜೀವನ ನಡೆಸುವುದಕ್ಕೂ ಕಷ್ಟವಾಗುತ್ತಿದೆ. ತುರ್ತಾಗಿ ಹಣ ಬೇಕಿದೆ. ಭಾರತಕ್ಕೆ ಬಂದ ನಂತರ ಹಿಂದಿರುಗಿಸುತ್ತೇನೆ ಎಂದು ಆರೋಪಿ ಸುಳ್ಳು ಹೇಳಿದ್ದ. ಮಾತನ್ನು ನಂಬಿದ್ದ ಯುವತಿ ಆತನ ಸ್ನೇಹಿತರ ಬ್ಯಾಂಕ್ ಖಾತೆಗಳಿಗೆ ಐದು ಬಾರಿ 7.70 ಲಕ್ಷ ಹಣ ಹಾಕಿದ್ದರು. ಸುಮಿತ್ ರಾಯ್ ಎಂಬಾತನ ಬ್ಯಾಂಕ್ ಖಾತೆಗೆ ಹಣ ಹಾಕಿದ್ದರು. ಆರೋಪಿ ಹಣ ಸಿಕ್ಕ ನಂತರ ಮ್ಯಾಟ್ರಿಮೋನಿ ವೆಬ್‍ಸೈಟ್‍ನಲ್ಲಿದ್ದ ಖಾತೆಯನ್ನ ತೆಗೆದು ಹಾಕಿದ್ದಾನೆ. ಹಣ ಜಮೆ ಮಾಡಿ ಎರಡು ತಿಂಗಳು ಕಳೆದರೂ ಅವನ ಸುಳಿವಿರಲಿಲ್ಲ. ಆ ನಂತರ ಆರೋಪಿಯ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.

ಯುವತಿ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *