ಹಾಸನ: ತನ್ನನ್ನು ಕೊಲಲ್ಲು ಪತಿ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆಯೊಬ್ಬರು ಪತಿಯ ಅಂಗಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಡಬಲ್ ಟ್ಯಾಂಕ್ ರಸ್ತೆಯಲ್ಲಿರುವ ರಾಘವೇಂದ್ರ ಹಾರ್ಡ್ವೇರ್ ಮಾಲಿಕ ಲೋಕೇಶ್ ಮತ್ತು ಪತ್ನಿ ದುರ್ಗಾಲಕ್ಷ್ಮಿ ಜಗಳ ಈಗ ಬೀದಿಗೆ ಬಿದ್ದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ ಲೋಕೇಶ್ ನನಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಮತ್ತು ಕೊಲೆಗೆ ಸಹ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ದುರ್ಗಾಲಕ್ಷ್ಮಿ ದುರ್ಗೆಯ ಅವತಾರವನ್ನೇ ತಾಳಿದ್ದಾರೆ.
ಲೋಕೇಶ್ ಮತ್ತು ದುರ್ಗಾಲಕ್ಷ್ಮಿ ಮದುವೆ ಆಗಿ ಮೂರು ವರ್ಷವಾಗಿದೆ. ಆರು ತಿಂಗಳು ಚೆನ್ನಾಗಿದ್ದ ಲೋಕೇಶ್ ಬೇರೊಬ್ಬಳೊಂದಿಗೆ ಅಕ್ರಮ ಸಂಭಂದ ಇಟ್ಟುಕೊಂಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಈಗಾಗಲೆ ಡೈವೋರ್ಸ್ ನೋಟಿಸ್ ನೀಡಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ದುರ್ಗಾ ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿ ನಂತರ ಹಾರ್ಡ್ವೇರ್ ಅಂಗಡಿಗೂ ಸಹ ಹಣವನ್ನು ನೀಡಿದ್ದರು ಎನ್ನಲಾಗಿದೆ.
ಈಗ ಒಬ್ಬಳೇ ಮಗಳ ಸ್ಥಿತಿಗೆ ಪರದಾಡುವಂತಾಗಿದೆ. ಹಲವು ಬಾರಿ ರಾಜಿ ಪಂಚಾಯಿತಿ ಮಾಡಿಸಿದರೂ ಸಹ ಸರಿಯಾಗದ ಲೋಕೇಶ್ ಈಗ ಪತ್ನಿಯೇ ಬೇಡ ಎಂದು ಹೇಳುತ್ತಾನೆ. ನನಗೆ ನ್ಯಾಯ ಬೇಕು ಎಂದು ನೊಂದ ಪತ್ನಿ ತನ್ನ ಅಳಲು ತೋಡಿಕೊಂಡಿದ್ದಾರೆ.