ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಯುವಕ ಬಲಿ

Public TV
1 Min Read

ಗದಗ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ 25 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ನಗರದ ಬೆಟಗೇರಿಯಲ್ಲಿ ನಡೆದಿದೆ.

ಮುತ್ತು ಭರಮಗೌಡ(25) ಮೃತ ದುರ್ದೈವಿ. ಕಳೆದ ಮಾರ್ಚ್ ತಿಂಗಳಲ್ಲಿ ಮೂರು ದಿನ ಮುತ್ತು ಕಿಡ್ನಾಪ್ ಆಗಿದ್ದ. ಇದಕ್ಕೆ ಕಾರಣ ಸ್ನೇಹಿತ ಉಮೇಶ್ ಸುಂಕದ ಬಳಿ 2 ಲಕ್ಷ ರೂಪಾಯಿ ಸಾಲವಾಗಿ ಹಣ ಪಡೆದಿದ್ದ. ಒಂದು ವರ್ಷದಿಂದ ಅಸಲು ಹಾಗೂ ಬಡ್ಡಿ ಕೊಟ್ಟಿರಲಿಲ್ಲ. ಹಾಗಾಗಿ 2 ಲಕ್ಷಕ್ಕೆ ಮೂರು ಪಟ್ಟು ಬಡ್ಡಿ ಸೇರಿಸಿ ಕೊಡುವಂತೆ ಆಗಾಗ ಕಿರಿಕ್ ಮಾಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಗರ್ಭಿಣಿ ಮಾಡಲು ಜೀವಾವಧಿ ಕೈದಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್

ಹಣ ಕೊಟ್ಟ ಸ್ನೇಹಿತ ಉಮೇಶ್ ಸುಂಕದ, ಉದಯ್ ಸುಂಕದ ಹಾಗೂ ವಿಕ್ರಮ್ ಎಂಬವರು ಸೇರಿ ಮುತ್ತು ಅವರನ್ನು ಕಿಡ್ನಾಪ್ ಮಾಡಿದ್ದಾರೆ. ಜನತಾ ಪ್ಲಾಟ್ ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ಅಲ್ಲಿ ಚಿತ್ರಹಿಂಸೆ ಕೊಡುವುದನ್ನು ಸ್ಥಳೀಯರು ನೋಡಿ ಬೈದಿದ್ದಾರೆ. ನಂತರ ರಾತ್ರೋರಾತ್ರಿ ತೋಟದ ಮನೆಗೆ ಎಳೆದೊಯ್ದು 3 ದಿನ ಕೂಡಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅನ್ನ, ನೀರು ಏನು ಕೊಟ್ಟಿಲ್ಲ. ಕುಡಿದ ಮತ್ತಿನಲ್ಲಿ ದೇಹದ ಮೂಳೆಗಳು ಪುಡಿ, ಪುಡಿ ಆಗುವಂತೆ ಸಾಕಷ್ಟು ಚಿತ್ರಹಿಂಸೆ ನೀಡಿದ್ದಾರೆ. ಸಾಕಷ್ಟು ನರಳಾಡಿದ್ದರೂ ಬಿಟ್ಟಿಲ್ಲ ಎಂಬ ಆರೋಪ ಕುಟುಂಬಸ್ಥರದ್ದಾಗಿದೆ.

3 ದಿನಗಳ ನಂತರ ಕುಟುಂಬಸ್ಥರಿಗೆ ವಿಷಯ ಗೊತ್ತಾಗಿ ಮುತ್ತು ಅವರನ್ನು ಕರೆತಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಕಳೆದ ಮಾರ್ಚ್ 26 ರಂದು ಈ ಘಟನೆ ನಡೆದಿದ್ದು, 28 ರಂದು ಕರೆತಂದು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮುತ್ತು ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆಗೆ ಬಾಲಕಿ ಬಲಿ – ತಂದೆ, ಅಣ್ಣನಿಂದಲೇ ಹತ್ಯೆ

ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೃತ್ಯಕ್ಕೆ ಕಾರಣರಾದ ಉಮೇಶ್, ಉದಯ್ ಹಾಗೂ ವಿಕ್ರಮ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಗದಗದ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ 2 ಲಕ್ಷಕ್ಕೆ ಜೀವ ತೆಗೆಯುವಂತೆ ಮಾಡಿರುವುದು ವಿಪರ್ಯಾಸ ಎಂದೇ ಹೇಳಬಹುದು.

Share This Article
Leave a Comment

Leave a Reply

Your email address will not be published. Required fields are marked *