ಬಾವಿಯಲ್ಲಿ ಬಿದ್ದು 8 ಗಂಟೆಗಳ ಕಾಲ ನರಳಾಡಿದ ವ್ಯಕ್ತಿಯ ರಕ್ಷಣೆ

Public TV
1 Min Read

ಗದಗ: ತೆರೆದ ಬಾವಿ ಕಟ್ಟೆ ಮೇಲೆ ಕೂತು ಆಯತಪ್ಪಿ ಬಾವಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

ನಗರದ ಚಿಂತಾಮಣಿ ಆಸ್ಪತ್ರೆ ಬಳಿ ಇರುವ ಬಾವಿಯಲ್ಲಿ ತಡರಾತ್ರಿ ವ್ಯಕ್ತಿ ಬಿದ್ದಿದ್ದರು. ಈ ವ್ಯಕ್ತಿ ಬಳ್ಳಾರಿ ಜಿಲ್ಲೆಯ ಬೈರಾಪುರ ಗ್ರಾಮದ 28 ವರ್ಷದ ಶಿವಾನಂದ ಗಿರಿಗೌಡರ್ ಎಂದು ಹೇಳಲಾಗಿದೆ. ಗದಗ ನಗರಕ್ಕೆ ಅವರ ಸಂಬಂಧಿಕರ ಮನೆಗೆಂದು ಬಂದಿದ್ದರು. ರಾತ್ರಿ ವೇಳೆ ಮನೆ ಸಿಗದ ಕಾರಣ ಬಾವಿ ಕಟ್ಟೆ ಮೇಲೆ ಕೂತಿದ್ದರು. ಆಯ ತಪ್ಪಿ ಸುಮಾರು 75 ಅಡಿ ಆಳವಿರುವ ಬಾವಿಯಲ್ಲಿ ಬಿದ್ದು ನರಳಾಡುತ್ತಿದ್ದರು.

ಬೆಳಗಿನ ಜಾವ ಇವರ ಧ್ವನಿ ಕೇಳಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಗ್ಗದ ಮೂಲಕ ಶಿವಾನಂದ ಅವರನ್ನ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಶಿವಾನಂದ ಅವರು ಸುಮಾರು ಎಂಟು ಗಂಟೆಗಳ ಕಾಲ ನೀರಿನಲ್ಲೇ ನಿಂತು ನರಳಾಡಿದ್ದರು.

ಶಿವಾನಂದ ಅವರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗದಗ ಅಗ್ನಿಶಾಮಕ ದಳ ಹಾಗೂ ರಾಜೀವ್ ಗಾಂಧಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *