ಬೆಂಗಳೂರು: ಕೆಪಿಎಲ್, ಸಿಸಿಎಲ್ ಆಯ್ತು. ಸ್ಯಾಂಡಲ್ವುಡ್ನಲ್ಲಿ ಇದೀಗ ನೂತನವಾಗಿ ಕೆಸಿಸಿ ಪಂದ್ಯಾವಳಿ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದ ‘ಕರ್ನಾಟಕ ಚಲನಚಿತ್ರ ಕಪ್’ ಕ್ರಿಕೆಟ್ ಟೂರ್ನಮೆಂಟ್ ಗೆ ಅದ್ಧೂರಿ ಚಾಲನೆ ಸಿಕ್ಕಿದೆ.
ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಒಟ್ಟಿಗೆ ಸೇರಿ ಫೀಲ್ಡ್ ಗಿಳಿಯುವ ಸಮಯ ಬಂದಿದೆ. ಸಿಸಿಎಲ್ ಮಾದರಿಯಲ್ಲಿ ಕನ್ನಡ ಚಿತ್ರೋದ್ಯಮದವರು ಸೇರಿ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್ಗೆ ಸಿದ್ಧವಾಗಿದ್ದಾರೆ. ಶುಕ್ರವಾರದಂದು ನಗರದ ಅರಮನೆ ಮೈದಾನದಲ್ಲಿ ಕೆಸಿಸಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಈ ಸಮಾರಂಭಕ್ಕೆ ಸಾಕ್ಷಿಯಾದರು.
ಕಿಚ್ಚ ಸುದೀಪ್ ಸಾರಥ್ಯದ ಕೆಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ನಟರಾದ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ಸುದೀಪ್, ಧನಂಜಯ್, ರಕ್ಷಿತ್ ಶೆಟ್ಟಿ, ನಿರೂಪ್ ಭಂಡಾರಿ, ಅನೀಶ್, ಚಂದನ್, ಯೋಗಿ, ದಿಗಂತ್, ಜೆಕೆ ಸೇರಿದಂತೆ ನೂರಾರು ಕಲಾವಿದರು ಭಾಗವಹಿಸಲಿದ್ದಾರೆ.
ಒಟ್ಟು ಆರು ತಂಡಗಳು, 10 ಓವರ್ಗಳ ಟಿ-10 ಪಂದ್ಯವಾಡಲಿವೆ. ಏಪ್ರಿಲ್ 7 ಮತ್ತು 8 ರಂದು ಬೆಂಗಳೂರಿನಲ್ಲಿ ಪಂದ್ಯಾವಳಿ ನಡೆಯಲಿದೆ. ಈ ಆರು ತಂಡಗಳಿಗೆ ಕ್ಯಾಪ್ಟನ್ ಬದಲು ಪೇಟ್ರನ್ಸ್ ಇರ್ತಾರೆ. ತಂಡಗಳ ಪೇಟ್ರನ್ಸ್ ಆಗಿ ನಿರ್ದೇಶಕ ಕೃಷ್ಣ, ಜಾಕ್ ಮಂಜು, ಸುದೀಪ್, ಸದಾಶಿವ ಶೆಣೈ, ಕೆ.ಪಿ.ಶ್ರೀಕಾಂತ್, ಇಂದ್ರಜಿತ್ ಲಂಕೇಶ್, ನಂದಕಿಶೋರ್ ಇರಲಿದ್ದಾರೆ.
ಕೆಸಿಸಿ ಕಪ್ನಲ್ಲಿ ಬರೀ ಕಲಾವಿದರಷ್ಟೇ ಅಲ್ಲದೆ ನಿರ್ದೇಶಕರು, ತಂತ್ರಜ್ಞರು, ನಿರ್ಮಾಪಕರು ಮತ್ತು ಪೋಷಕನಟರು ಸಹ ಭಾಗಿಯಾಗಲಿದ್ದಾರೆ. ಹಾಗೆ ಈ ಟೂರ್ನಮೆಂಟ್ ನಲ್ಲಿ ಪತ್ರಕರ್ತರ ತಂಡವೂ ಇರಲಿದೆ. ಪ್ರತಿ ತಂಡದಲ್ಲೂ ಸ್ಟಾರ್ ಆಟಗಾರರು ಇರ್ತಾರೆ.