ಬೆಂಗಳೂರು: ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುವ ಯುವಕ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಆನೇಕಲ್ ತಾಲೂಕಿನ ಮುತ್ಯಾಲಮಡುವಿನಲ್ಲಿ ನಡೆದಿದೆ.
ಮೃತ ದೇಹವನ್ನು ಆನೇಕಲ್ ತಾಲೂಕಿನ ಮುತ್ತುಗಟ್ಟಿ ನಿವಾಸಿ ವಿಶ್ವನಾಥ(28) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ವಿಶ್ವನಾಥ್ ಕಳೆದ ಶನಿವಾರ ಕೆಲಸಕ್ಕೆ ತೆರಳುವುದಾಗಿ ಮನೆಯಿಂದ ತೆರಳಿದವರು ಸಂಜೆಯಾದರು ಮನೆಗೆ ವಾಪಸ್ಸಾಗದನ್ನು ಕಂಡು ಕುಟುಂಬಸ್ಥರು ಎಲ್ಲಡೆ ಹುಡುಕಾಟ ನಡೆಸಿದ್ದರು.
ಭಾನುವಾರ ಸಂಜೆ ಆನೇಕಲ್ ಪೊಲೀಸರಿಗೆ ಮುತ್ಯಾಲಮಡುವು ನಲ್ಲಿ ಅಪರಿಚಿತ ವ್ಯಕ್ತಿಯ ಶವ ದೊರೆತ ಮಾಹಿತಿ ದೊರೆತಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ವ್ಯಕ್ತಿಯ ಶವವನ್ನು ಪರಿಶೀಲನೆ ನಡೆಸಿದ್ದಾರೆ. ನಂತರದಲ್ಲಿ ಮೃತ ವಿಶ್ವನಾಥ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮೃತದೇಹ ವಿಶ್ವನಾಥ ಶವವೆಂದು ತಿಳಿದು ಬಂದಿದೆ. ಶವದ ಮುಖದ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು ಪರಿಚಯಸ್ಥರು ಇಲ್ಲಿಗೆ ಕರೆತಂದು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಅನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.