ಅಚ್ಚ ಕನ್ನಡದಲ್ಲಿ ವ್ಯವಹರಿಸಿದ್ದಕ್ಕೆ ಸಾರಿಗೆ ಇಲಾಖೆಯ ಕೆಲ್ಸ ಹೋಯ್ತು!

Public TV
1 Min Read

ಕೊಪ್ಪಳ: ಕನ್ನಡ ಉಳಿಸಿ-ಬೆಳೆಸಲು ಸರ್ಕಾರ ಸಾಕಷ್ಟು ಅನುದಾನ ಮೀಸಲಿಡುತ್ತಿದೆ. ಆದರೆ ರಾಜ್ಯ ಸಾರಿಗೆ ಸಂಸ್ಥೆ ನೌಕರರೊಬ್ಬರು ಅಚ್ಚ ಕನ್ನಡದಲ್ಲಿ ವ್ಯವಹರಿಸುವುದರಿಂದ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ.

ಮೂಲತಃ ಕೊಪ್ಪಳ ಜಿಲ್ಲೆ ಕುಷ್ಟಗಿಯವರಾದ ಶರಣಪ್ಪ ಹೂಗಾರ ರಾಜ್ಯ ಸಾರಿಗೆ ಸಂಸ್ಥೆಯ ಹೊಸಪೇಟೆ ಘಟಕದಲ್ಲಿ ಆಡಳಿತ ವಿಭಾಗದಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಇವರ ಕನ್ನಡ ಪ್ರೇಮ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ನಾನು ಅಚ್ಚ ಕನ್ನಡದಲ್ಲಿ ಮಾತನಾಡುತ್ತಿರುವುದಕ್ಕೆ ಕಿರುಕುಳ ನೀಡುತ್ತಿದ್ದಾರೆ. ಕೆಲಸಕ್ಕೆ ಬಂದರೂ ಗೈರುಹಾಜರಿ ಹಾಕುವುದು, ದಿನಕ್ಕೊಂದು ವಿಭಾಗದಲ್ಲಿ ಕೆಲಸ ಮಾಡುವಂತೆ ಸೂಚಿಸುವ ಮೂಲಕ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶರಣಪ್ಪ ಆರೋಪಿಸಿದ್ದಾರೆ.

ನಾನು ಕಳೆದ 35 ವರ್ಷದಿಂದ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಇದೀಗ ಹೊಸಪೇಟೆಯ ಡಿಪೋ ಮ್ಯಾನೆಜರ್ ಕೆ.ಬಸವರಾಜ್ ನನಗೆ ಅಚ್ಚ ಕನ್ನಡದಲ್ಲಿ ಮಾತನಾಡಬೇಡ ಎಂದು ಹೇಳಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಶರಣಪ್ಪ ದೂರಿದ್ದಾರೆ.

ನಾನು ಕನ್ನಡ ಅಂಕಿ ಬಳಕೆ ಮಾಡುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಅಧಿಕಾರಿಗಳು ನನಗೆ ಕಿರುಕುಳ ನೀಡಿದ್ದರಿಂದ ಕೆಲಸ ಬೇಕಾದರೆ ಬಿಡ್ತೀನಿ. ಆದರೆ ಕನ್ನಡ ಮಾತಾಡೋದು ಮತ್ತು ಕನ್ನಡ ಅಂಕಿ ಬಳಕೆ ಮಾಡೋದನ್ನು ಬಿಡಲ್ಲ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಕೆ.ಬಸವರಾಜ್ ಪ್ರತಿದಿನ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಶರಣಪ್ಪ ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *